ಪಾಂಡವಪುರ: ‘ನನ್ನ ಮಗ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯ ಮಂತ್ರಿ ಮಾಡಲು ಈ ಹೋರಾಟವಲ್ಲ. ಪ್ರಾದೇಶಿಕ ಪಕ್ಷ ಉಳಿಯದಿದ್ದರೆ ನಮ್ಮ ನೀರನ್ನು ನಾವು ಪಡೆಯಲು ಆಂಧ್ರ, ತಮಿಳುನಾಡು ಸರ್ಕಾರಗಳನ್ನು ಮಣಿ ಸಲು ಸಾಧ್ಯವಿಲ್ಲ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಮಿಳುನಾಡಿನಲ್ಲಿ ಡಿಎಂಕೆ ಅಥವಾ ಎಡಿಎಂಕೆ ಅಧಿಕಾರಕ್ಕೆ ಬರುತ್ತವೆ. ಅವು ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡುತ್ತವೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ರಾಜ್ಯದ ನೀರಿಗಾಗಿ ದನಿ ಎತ್ತುವುದಿಲ್ಲ. ಈ ನಾಡಿನ ನೀರಿನ ಉಳಿವಿಗಾಗಿ ಕಾಂಗ್ರೆಸ್ ಮುಖಂಡರು ಇದುವರೆಗೂ ಹೋರಾಟ ನಡೆಸಿಲ್ಲ ಎಂದರು.
ತಮಿಳುನಾಡಿನ 40 ಸಂಸದರು ಸಂಸತ್ನಲ್ಲಿ ಕಾವೇರಿ ನೀರಿಗಾಗಿ ದನಿ ಎತ್ತಿದರು. ರಾಜ್ಯದ 4 ಮಂದಿ ಸಂಸದರು ಮಂತ್ರಿಯಾಗಿದ್ದರು. ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ ನೀರಿನ ಪರವಾಗಿ ದನಿ ಎತ್ತಲೇ ಇಲ್ಲ. ಜೆಡಿಎಸ್ನ ಸಂಸದನಾಗಿದ್ದ ನಾನು ದನಿ ಎತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾ ಯದ ವಿರುದ್ಧ ದನಿ ಎತ್ತಿದ್ದೇನೆ ಎಂದರು.
ಯಾರೇ ಹೋರಾಟ ನಡೆಸಲಿ ಅದು ಉಪಯೋಗಕ್ಕೆ ಬರಬೇಕು. ರಾಜಕೀಯ ಲಾಭಕ್ಕಾಗಿ ಅಲ್ಲ. ಕಾಂಗ್ರೆಸ್ನವರು ಮೇಕೆದಾಟು ಹೋರಾಟ ನಡೆಸಿದ್ದು ಯಾವ ಪ್ರಯೋಜನಕ್ಕೂ ಬರಲಿಲ್ಲ ಎಂದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿದ್ದ ಒಬ್ಬರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಮಾಧ್ಯಮದಲ್ಲಿ ಜಾಹೀರಾತು ನೀಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮಹ ದಾಯಿ, ಕೃಷ್ಣ, ಕಾವೇರಿ ನೀರಿನ ನ್ಯಾಯಕ್ಕಾಗಿ ಕೇಂದ್ರಕ್ಕೆ ಪತ್ರ ಬರೆದು ನ್ಯಾಯ ಕೇಳಿದರು. ಇಷ್ಟಾದರೆ ಸಾಲದು ಕೇಂದ್ರದ ವಿರುದ್ಧ ನಾಡಿನ ಜನತೆಯ ಪರವಾಗಿ ಹೋರಾಟ ನಡೆಸಬೇಕಿದೆ. ಎಂದರು.
ಪಕ್ಷಕ್ಕೆ ಶಕ್ತಿ ತುಂಬುತ್ತಿರುವ ಮುಸ್ಲಿಮರು: ಮುಸ್ಲಿಂ ಸಮುದಾಯವು ನಮ್ಮ ಪಕ್ಷಕ್ಕೆ ಶಕ್ತಿ ತುಂಬುತ್ತಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಸಂಸದೀಯ ಮಂಡಳಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲಾ ಗಿದೆ. ಇನ್ನು ಮುಂದೆ ಜೆಡಿಎಸ್ ಮತ್ತಷ್ಟು ಸಕ್ರಿಯಗೊಳ್ಳಲಿದೆ ಎಂದು ಹೇಳಿದರು.
ಉಸಿರು ಇರುವವರೆಗೂ ಜೆಡಿಎಸ್ ನಲ್ಲೇ: ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ನನ್ನ ಕೊನೆಯ ಉಸಿರು ಇರುವವರೆಗೂ ದೇವೇಗೌಡರ ಜೊತೆ ಇರುತ್ತೇನೆ ಎಂದು ಹೇಳಿದರು.
ಶಾಸಕ ಡಿ.ಸಿ.ತಮ್ಮಣ್ಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಶಾಸಕ ನಿಸರ್ಗ ನಾರಾಯಣಸ್ವಾಮಿ, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ಕಣಿವೆ ಯೋಗೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶವಂತ್ಕುಮಾರ್, ಜೆಡಿಎಸ್ ಮುಖಂಡರಾದ ಕೆ.ವೈರಮುಡಿಗೌಡ, ಎಸ್.ಎ.ಮಲ್ಲೇಶ್, ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮು ಇದ್ದರು.
ಯಾತ್ರೆಯು ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ದುದ್ದ ಹೋಬಳಿಯಿಂದ ಜಕ್ಕನಹಳ್ಳಿ ಮಾರ್ಗವಾಗಿ ತೊಣ್ಣೂರು ಕೆರೆಗೆ ತೆರಳಿತು. ಅಲ್ಲಿ ಪೂಜೆ ಸಲ್ಲಿಸಿ ಕೆರೆ ನೀರನ್ನು ಪೂರ್ಣಕುಂಭಕ್ಕೆ ತುಂಬಿ ಪಾಂಡವಪುರ ಪಟ್ಟಣ ತಲುಪಿತು.
ಜನತಾ ಜಲಧಾರೆ ಯಾತ್ರೆ ಪಾಂಡವಪುರ ಪಟ್ಟಣದಿಂದಚಿನಕುರಳಿ ಮಾರ್ಗವಾಗಿ ಕೆ.ಆರ್.ಪೇಟೆಗೆ ತೆರಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.