ಮಂಡ್ಯ: ‘ಕೆ.ಆರ್.ಪೇಟೆಯಲ್ಲಿ ನನ್ನನ್ನು ಹೊಡೆದು ಹಾಕಲು ಕೆಲವರು ₹50 ಲಕ್ಷ ಹಣಕ್ಕೆ ನಿಗದಿ (ಫಿಕ್ಸ್) ಮಾಡಿದ್ದರು. ಆದರೆ ನನ್ನನ್ನು ಹೊಡೆಯಲು ಆ ಭಗವಂತನ ಶಕ್ತಿ ಬಿಟ್ಟುಕೊಡಲಿಲ್ಲ’ ಎಂದು ಕೆ.ಆರ್.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ ಗ್ರಾಮದಲ್ಲಿ ಗುರುವಾರ ಮಾತನಾಡಿರುವ ಅವರು ‘ವಿಶ್ವಪ್ರಸಿದ್ಧರಾಗಿರುವ ದಾವೂದ್ ಇಬ್ರಾಹಿಂ, ಛೋಟ ರಾಜನ್ ಅಂಥವರೇ ನನ್ನನ್ನು ಹೊಡೆಯಲು ಸಾಧ್ಯವಾಗಿಲ್ಲ. ದೇವರ ಆಶೀರ್ವಾದ ಇರುವ ನನ್ನನ್ನು ನನ್ನದೇ ತಾಲ್ಲೂಕಿನವರು ಹೊಡೆಯಲು ಸಾಧ್ಯವೇ. ನಾನು ಈಗ ಗನ್ಮ್ಯಾನ್ ಇಟ್ಟುಕೊಂಡಿಲ್ಲ. ಜನರ ಆಶೀರ್ವಾದ ಇರುವವರೆಗೆ ನಾನು ಭಯಪಡುವುದಿಲ್ಲ’ ಎಂದು ಹೇಳಿದ್ದಾರೆ.
‘ಯಾರು ಕೆಟ್ಟವರಿದ್ದಾರೆ, ಅವರು ಹೇಗೆ ಲೂಟಿ ಹೊಡೆಯುತ್ತಿದ್ದಾರೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಕೆಟ್ಟವರಿಗೆ ಪಾಠ ಕಲಿಸುವುದೇ ನನ್ನ ಗುರಿ. ತಾಲ್ಲೂಕಿನ ಅಭಿವೃದ್ದಿಗಾಗಿ ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದ್ದೇನೆ. ನಾನು ಯಾವುದೇ ಕಾರಣಕ್ಕೂ, ಯಾರಿಗೂ ಹೆದರುವುದಿಲ್ಲ’ ಎಂದು ಹೇಳಿದ್ದಾರೆ.