ಕೆ.ಆರ್. ಪೇಟೆ: ಬಿಸಿಲ ಬೇಗೆಯಿಂದ ಬಳಲಿದ್ದ ಧರಣಿಗೆ ಮಳೆ ತಂಪೆರೆಯುತ್ತಿದ್ದು ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದೆ.
ಒಂದು ವಾರದಿಂದ ಸುರಿಯು ತ್ತಿರುವ ಮಳೆಯಿಂದಾಗಿ ಹೊಲ, ಗದ್ದೆ, ತೋಟಗಳಲ್ಲಿ ನೀರು ನಿಂತಿದ್ದು ರೈತರ ಮೊಗದಲ್ಲಿ ಹರುಷ ಮೂಡಿದೆ. ಬತ್ತಿದ್ದ ಹಳ್ಳಗಳಲ್ಲಿ ನೀರು ಹರಿಯುತ್ತಿರುವುದರಿಂದ ಕೆರೆ- ಕಟ್ಟೆಗಳಲ್ಲಿ ನೀರಿನ ಸಂಗ್ರಹವಾಗುತ್ತಿದೆ. ತಾಲ್ಲೂಕಿನಲ್ಲಿ ವಾಡಿಕೆಗಿಂತ (16.50 ಸೆ.ಮೀ. ) ಹೆಚ್ಚು ಮಳೆಯಾಗಿದ್ದು ಮೇ 21ರವರೆಗೆ 26.2 ಸೆ.ಮೀ. ಮಳೆಯಾಗಿದೆ.
ಇಲ್ಲಿನ ಮುರುಕನ ಹಳ್ಳಿ ಬಳಿಯ ತೊರೆಹಳ್ಳ ಸೇರಿದಂತೆ ಹಲವು ಹಳ್ಳಗಳು ತುಂಬಿ ಹರಿಯುತ್ತಿದ್ದು ಹಲವೆಡೆ ಚಿಕ್ಕ ಪುಟ್ಟ ಕಟ್ಟೆಗಳು ತುಂಬಿ ತುಳುಕಿವೆ. ತಾಲ್ಲೂಕು ಹೇಮಾವತಿ ನದಿಯ ಸೆರಗಿನಲ್ಲಿ ಇದ್ದರೂ ಮಳೆಯ ಅಭಾವದಿಂದ ನೀರಾವರಿ ಇಲಾಖೆ ಕಾಲುವೆಯಲ್ಲಿ ಕ ನೀರು ಹರಿಸದ ಪರಿಣಾಮ ರೈತರು ಸರಿಯಾದ ವ್ಯವಸಾಯ ಮಾಡಲು ಸಾಧ್ಯವಾಗಲಿಲ್ಲ. ಹೇಮಾವತಿ ಮುಖ್ಯ ಕಾಲುವೆ ಜೊತೆಗೆ ಉಪ ಕಾಲುವೆಗಳು ಇದ್ದರೂ ನೀರು ಹರಿಯದಿದ್ದರಿಂದ ರೈತರು ಭತ್ತ ಸೇರಿದಂತೆಮಳೆಯಾಶ್ರಿತ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ.
ಅಲ್ಲದೆ ಕೆರೆ- ಕಟ್ಟೆಗಳಿಗೆ ನೀರು ಹರಿಸದ್ದರಿಂದ ಅಂತರ್ಜಲ ಬತ್ತಿ ಕೊಳವೆ ಬಾವಿಗಳಿಂದಲೂ ನೀರು ಚಿಮ್ಮದ ಸ್ಥಿತಿ ತಲೆದೋರಿತ್ತು. 14 ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು. ಹಲವೆಡೆ ಕೊಳವೆ ಬಾವಿ ಕೊರೆಯಿಸಲಾಗಿತ್ತು. ಆದರೂ, ತೆಂಗು, ಅಡಿಕೆ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿದ್ದವು. ಈ ಬಾರಿ ಪೂರ್ವ ಮುಂಗಾರು ಮಳೆ ಚೆನ್ನಾಗಿ ಸುರಿತ್ತಿರುವುದರಿಂದ ರೈತರಲ್ಲಿ ಆತಂಕ ಮರೆಯಾಗಿದೆ. ಉತ್ತಮ ಬೆಳೆ ತೆಗೆಯುವದಿಕ್ಕಾಗಿ ರೈತರು ತಯಾರಿ ನಡೆಸಿದ್ದಾರೆ. ತಾಲ್ಲೂಕಿನಾದ್ಯಂತ ಭೂಮಿಯನ್ನು ಉಳುವುದು ಸಮ ತಟ್ಟುಗೊಳಿಸುವುದು ಗಿಡಗಂಟಿ ತೆಗೆಯುವುದು ನಡೆದಿದೆ. ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಇಟ್ಟು ಕೊಳ್ಳುವುದು ರಸಗೊಬ್ಬರ ಮತ್ತು ಸೀಮೆ ಗೊಬ್ಬರಗಳ ಸಂಗ್ರಹ ಕಾರ್ಯ ನಡೆದಿದೆ. ಮುಂಗಾರಿನಲ್ಲಿ ಅಲಸಂದೆ, ಅವರೆ, ಜೋಳ, ರಾಗಿ, ಎಳ್ಳು, ನವಣೆ, ಸಜ್ಜೆ, ಹುಚ್ಚೆಳ್ಳು, ಮುಸುಕಿನ ಜೋಳ ಮುಂತಾದ ಧಾನ್ಯಗಳನ್ನು ಬಿತ್ತಲು ರೈತರು ಸಿದ್ಧತೆ ಮಾಡಿ
ಕೊಂಡಿದ್ದಾರೆ .