ಬೆಳಕವಾಡಿ: ಮಳವಳ್ಳಿ ತಾಲ್ಲೂಕಿನ ಕುಂದೂರು ಗ್ರಾಮದೇವತೆ ಕುಂದೂರಮ್ಮ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಪೂಜೆ, ದೇವಿಯ ಚಿನ್ನದ ಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆ ನಡೆಯಿತು.
ಮಂಗಳವಾರ ರಾತ್ರಿ 10ಕ್ಕೆ ಶಿರಮಹಳ್ಳಿ ಗ್ರಾಮಸ್ಥರು ಹೆಬ್ಬರೆಯೊಂದಿಗೆ ಕುಂದೂರಿಗೆ ಆಗಮಿಸಿದಾಗ ಜವರಹಟ್ಟಿ ಬಳಿ ದೇವಿಯ ಚಿನ್ನದ ಮೂರ್ತಿಯನ್ನು ಕನ್ನೆಕರಡಿ ಹೂವಿನ ಕುಕ್ಕೆಯಲ್ಲಿಟ್ಟು ಆಡಿಸಿ ನಂತರ ವೀರಭದ್ರಸ್ವಾಮಿ ದೇವಸ್ಥಾನದಿಂದ ದೇವಿಯ ಚಿನ್ನದ ಮೂರ್ತಿಯನ್ನು ಟ್ರಾಕ್ಟರ್ನಲ್ಲಿ ಇಟ್ಟು ಛತ್ರಿ ಚಾಮರ, ವಿವಿಧ ಹೂ, ಹೊಂಬಾಳೆಗಳಿಂದ ಅಲಂಕರಿಸಿ ಪಲ್ಲಕ್ಕಿ ಉತ್ಸವವನ್ನು ಹೆಬ್ಬರೆ ಹಾಗೂ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕುಂದೂರು ಗುಡ್ಡದ ಮೂಲ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು.
ಬುಧವಾರ ಬೆಳಿಗ್ಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಭಕ್ತರು ಹೂ, ಹಣ್ಣು ಕಾಯಿ ಕೊಟ್ಟು ಪೂಜೆ ಸಲ್ಲಿಸಿ ಈಡುಗಾಯಿ ಹೊಡೆದರು. ಮಧ್ಯಾಹ್ನ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ದೇವಿಯ ಉತ್ಸವ ಚಿನ್ನದ ಮೂರ್ತಿಯನ್ನು ತಂದು ಇರಿಸುವುದರೊಂದಿಗೆ ಎರಡು ದಿನ ನಡೆದ ಕುಂದೂರಮ್ಮನ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.