ಮಂಡ್ಯ: ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವಂತೆ ಶಿಫಾರಸು, ಆದೇಶ ನೀಡುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿ, ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಜಿಲ್ಲಾ ಹಿತರಕ್ಷಣಾ ಸಮಿತಿ ಸದಸ್ಯರು ನಡೆಸುತ್ತಿರುವ ಕರಪತ್ರ ಚಳವಳಿ ಮಂಗಳವಾರವೂ ಮುಂದುವರಿಯಿತು.
ನಗರದ ಸರ್ಎಂ.ವಿ.ಪ್ರತಿಮೆ ಎದುರು ನಡೆಸುತ್ತಿರುವ ಹೋರಾಟ 134ನೇ ದಿನಕ್ಕೆ ತಲುಪಿದ್ದು ಪ್ರತಿಭಟನಾಕಾರರು ವೈವಿಧ್ಯಮಯ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಸಾರಿಗೆ ಬಸ್ ನಿಲ್ದಾಣದಲ್ಲಿ ರಾಜ್ಯದ ವಿವಿಧೆಡೆ ತೆರಳುವ ಸಾರಿಗೆ ಸಂಸ್ಥೆ ಬಸ್ಗಳಿಗೆ ಭಿತ್ತಿಪತ್ರ ಅಂಟಿಸುವ ಚಳವಳಿ ಮುಂದುವರಿಸಿದರು.
ಚಳವಳಿಗಳನ್ನು ಜನಪ್ರತಿನಿಧಿಗಳು ಕೇವಲವಾಗಿ ನೋಡುವುದನ್ನು ಮೊದಲು ಬಿಡಬೇಕು. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾತ್ರ ಕರಪತ್ರಗಳನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮದಿಂದಲೂ ರೈತರು ಬಂದು ಧರಣಿಯಲ್ಲಿ ಕೂರಬೇಕು ಎನ್ನುವ ಕರೆ ನೀಡಿ ಚಳವಳಿ ತೀವ್ರಗೊಳಿಸಲಾಗುವುದು. ನಮಗೆ ಕಾವೇರಿ ಸಮಸ್ಯೆ ಶಾಶ್ವತವಾಗಿ ಪರಿಹಾರ ಸಿಗುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ರೈತಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ ‘ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತಗೊಳ್ಳುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಬಿಡಲಾಗಿದೆ, ಆದರೆ ಅದು ಕೊನೆಯ ಭಾಗ ಮದ್ದೂರು- ಮಳವಳ್ಳಿ ಪ್ರದೇಶಕ್ಕೆ ತಲುಪಿಲ್ಲ. ಈಗಾಗಲೇ ನಾಲೆಗೆ ನೀರು ನಿಲ್ಲಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ. ಜಿಲ್ಲೆಯ ರೈತರ ಹಿತಕ್ಕಿಂತ ರಾಜ್ಯ ಸರ್ಕಾರಕ್ಕೆ ತಮಿಳುನಾಡು ರಾಜ್ಯವೇ ಮುಖ್ಯವಾಗಿದೆ’ ಎಂದು ಆರೋಪಿಸಿದರು.
ಸಮಿತಿಯ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮಂಜುನಾಥ್ ಇದ್ದರು.