2015ರ ಈಚೆಗೆ ಮರಣ ಹೊಂದಿರುವವರ ಹೆಸರನ್ನು ಆಧಾರ್ ಮತ್ತು ಪಡಿತರ ಚೀಟಿಯಿಂದ ತೆಗೆಯುವ ಹಾಗೂ ಪಿಂಚಣಿ ಯೋಜನೆಯಿಂದ ಶಾಶ್ವತವಾಗಿ ಕೈ ಬಿಡುವ ಉದ್ದೇಶದಿಂದ ಜಾರಿಗೆ ಬಂದಿರುವ ‘ಈ ಜನ್ಮ’ ಆ್ಯಪ್ಗೆ ಮಾಹಿತಿ ತುಂಬುವಾಗ 411 ಮಂದಿ ಮೃತರಿಗೆ ಒಂದೇ ಆಧಾರ್ ಸಂಖ್ಯೆ ಕೊಡಲಾಗಿದೆ. ಇದರಲ್ಲಿ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಲೋಪ ಎಸಗಿದ್ದಾರೆ. ಜಿಲ್ಲೆಗೆ ಪೈಲಟ್ ಯೋಜನೆಯಾಗಿ ಬಂದಿರುವ ಈ ಯೋಜನೆಗೆ ಕೆಟ್ಟ ಹೆಸರು ತಂದಿದ್ದಾರೆ. ಗ್ರಾಮಲೆಕ್ಕಿಗರಾದ ಪುಟ್ಟಸ್ವಾಮಿ, ಮಂಜುನಾಥ್, ರಮೇಶ್, ಸಿದ್ದೇಶ್ ಇತರರು ತಪ್ಪು ಮಾಡಿರುವುದು ಸಾಬೀತಾಗಿದೆ. ತಪ್ಪು ಮಾಡಿರುವವರ ವಿರುದ್ಧ ಕಂದಾಯ ಇಲಾಖೆ ಕಾರ್ಯದರ್ಶಿಗೆ ದೂರು ನೀಡಿದ್ದೇನೆ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದರು.