ಮಂಡ್ಯ: ‘ಟೆಲಿಫೋನ್ ಕದ್ದಾಲಿಕೆ ಕುರಿತು ನಾನು ಲೋಕಸಭಾ ಚುನಾವಣೆ ಸಂದರ್ಭದಲ್ಲೇ ರಾಜ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೆ. ನನಗೆ ಆಗಲೇ ಅನುಮಾನವಿತ್ತು. ಇದು ಬಹಳ ಗಂಭೀರವಾದ ಪ್ರಕರಣವಾದ್ದರಿಂದ ಉನ್ನತ ಮಟ್ಟದ ತನಿಖೆ ನಡೆಯುವುದು ಸೂಕ್ತ’ ಎಂದು ಸಂಸದೆ ಎ.ಸುಮಲತಾ ಭಾನುವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆ ವೇಳೆ ನನ್ನ ಫೋನ್ ಕದ್ದಾಲಿಕೆಯ ಬಗ್ಗೆ ಅನುಮಾನ ಬಂದಿತ್ತು. ನಾನು ತಡ ಮಾಡದೆ ದೂರು ನೀಡಿದ್ದೆ. ಈಗ ಅದು ಸತ್ಯವಾಗುತ್ತಿದ್ದು ಗಂಭೀರ ಸ್ವರೂಪ ಪಡೆದಿದೆ. 300ಕ್ಕೂ ಹೆಚ್ಚು ಜನರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬುದು ಆಶ್ಚರ್ಯ ಮೂಡಿಸುತ್ತದೆ. ಸರ್ಕಾರ ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಕೈಗೊಂಡಿದ್ದು ನಿಜಾಂಶ ಹೊರಬರುವ ನಿರೀಕ್ಷೆ ಇದೆ’ ಎಂದರು.
‘ಚುನಾವಣೆ ವೇಳೆ ಹಲವು ಬಾರಿ ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡಿದ್ದೆ. ಆದರೆ, ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಕದ್ದಾಲಿಕೆ ಮಾಡಿರುವುದು ನಿಜವೇ ಆಗಿದ್ದರೆ ಅದು ಬಹಳ ದೊಡ್ಡ ಅಪರಾಧ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂಬ ನಂಬಿಕೆ ನನಗೆ ಇದೆ’ ಎಂದರು.
ಇವನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.