ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಶಾಮಿಯಾನ ಹಾಕಿ ಅಡುಗೆ ತಯಾರಿಸಿ, ಊಟ ಮಾಡಿದ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.
ಜಲಾಶಯದ ಉತ್ತರ ದಂಡೆಗೆ 200 ಮೀಟರ್ ದೂರದಲ್ಲಿ, ಜಲಾಶಯ ವ್ಯಾಪ್ತಿಯಲ್ಲಿ ಶಾಮಿಯಾನ ಹಾಕಿ ಅಡುಗೆ ಸಿದ್ಧಪಡಿಸಲಾಗಿದೆ. ಅದೇ ಜಾಗದಲ್ಲಿ ಊಟವನ್ನೂ ಮಾಡಿದ್ದಾರೆ. ಊಟ ಮಾಡುವ ವೇಳೆ ಸಂಗೀತ ಕೇಳುತ್ತಾ ನೃತ್ಯ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜಲಾಶಯ 124.80 ಅಡಿಗೆ ಭರ್ತಿಯಾದರೆ ನೀರು ನಿಲ್ಲುವ ಸ್ಥಳದಲ್ಲೇ ಶನಿವಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅಡುಗೆ ಮಾಡಿದ್ದಾರೆ. ಗಂಟೆಗಟ್ಟಲೆ ನೃತ್ಯವನ್ನೂ ಮಾಡಿದ್ದಾರೆ. ಈ ಕುರಿತ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.