ಮದ್ದೂರು: ‘ಅಂಚೆ ಇಲಾಖೆಯ ಸೇವೆಗಳು ಸಾರ್ವಕಾಲಿಕವಾಗಿದ್ದು, ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುತ್ತಿದೆ. ಸಾರ್ವಜನಿಕರಿಗೆ ಹಿಂದಿನಿಂದಲೂ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ’ ಎಂದು ಕೃಷಿಕ ಲಯನ್ಸ್ನ ಆಡಳಿತಾಧಿಕಾರಿ ಹನುಮಂತು ತಿಳಿಸಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಮಂಡ್ಯದ ಕೃಷಿಕ ಲಯನ್ಸ್ ಸಂಸ್ಥೆ ಹಾಗೂ ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ನಿಂದ ‘ವಿಶ್ವ ಅಂಚೆ ದಿನ’ದ ಅಂಗವಾಗಿ ಅಂಚೆ ಇಲಾಖೆಯ 21 ಅಧಿಕಾರಿ ಹಾಗೂ ಸಿಬ್ಬಂದಿಗೆ ಸನ್ಮಾನಿಸಿ ಮಾತನಾಡಿದರು.
‘ಅಂಚೆ ಇಲಾಖೆಯು ಗ್ರಾಮೀಣ ಭಾಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಅಂಚೆ ಇಲಾಖೆ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ’ ಎಂದರು.
‘ಭ್ರಷ್ಟಾಚಾರ ರಹಿತವಾದ ಸೇವಾ ಮನೋಭಾವ ಹೊಂದಿದ ಅಂಚೆ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸೇವೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಂಚೆ ಇಲಾಖೆಗೆ ವಿಸ್ತೃತವಾದ ಐತಿಹಾಸಿಕ ಇತಿಹಾಸವಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ನೀಡಿ ಇಲಾಖೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಬೇಕಿದೆ. ಪತ್ರ, ಸ್ಟ್ಯಾಂಪ್, ವಿಮೆ ಸೇರಿದಂತೆ ಇನ್ನಿತರ ಸೌಲಭ್ಯ ನೀಡಲಾಗುತ್ತಿದೆ’ ಎಂದರು.
ಅಂಚೆ ಇಲಾಖೆಯ ಅಧಿಕ್ಷಕ ಎಂ. ಲೋಕನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯ ಅಂಚೆ ಅಧೀಕ್ಷಕರಾದ ಎಂ. ಲೋಕನಾಥ್, ಸಂಸ್ಕೃತಿ ಲಯನ್ಸ್ ಸಂಸ್ಥೆಯ ವಕೀಲ ಮಾದೇಗೌಡ, ಸಕ್ಕರೆನಾಡು ಲಯನ್ಸ್ ನ ಕೆ.ಆರ್.ಶಶಿಧರ ಈಚಗೆರೆ, ರುದ್ರಾಕ್ಷಿಪುರ ಅಪ್ಪಾಜಿ, ರಮೇಶ್,ಅಮೃತ ಲಯನ್ಸ್ ಲೋಕೇಶ್, ಅಂಚೆ ಇಲಾಖೆಯ ಶ್ರೀಕಾಂತ್, ರಾಜು ಇದ್ದರು.