ಶ್ರೀರಂಗಪಟ್ಟಣ: ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಜಂಬೂಸವಾರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ 3 ದಿನ ನಡೆಯುವ ಐತಿಹಾಸಿಕ ಶ್ರೀರಂಗಪಟ್ಟಣ ದಸರಾಕ್ಕೆ ಸೋಮವಾರ ಚಾಲನೆ ನೀಡಿದರು.
ಬಾಬುರಾಯನಕೊಪ್ಪಲಿನ ಬನ್ನಿ ಮಂಟಪದ ಬಳಿ ಸಾಂಪ್ರದಾಯಿಕ ಬನ್ನಿಪೂಜೆ ನೆರವೇರಿಸತು. ಡಾ.ಭಾನು ಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡದ ಸದಸ್ಯರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸಿದರು.
ಮಹೇಂದ್ರ ಹೆಸರಿನ ಆನೆ ಚಾಮುಂಡೇಶ್ವರಿ ದೇವಿಯ ಉತ್ಸವವನ್ನು ಹೊತ್ತು ಸಾಗಿತು. ವರಲಕ್ಷ್ಮಿ ಮತ್ತು ವಿಜಯ ಆನೆಗಳು ಕುಮ್ಕಿಆನೆಗಳಾಗಿ ಹೆಜ್ಜೆ ಹಾಕಿದವು.
ಕಿರಂಗೂರು, ಬಾಬುರಾಯನಕೊಪ್ಪಲು, ಪಟ್ಟಣದ ಕುವೆಂಪು ವೃತ್ತ, ಪುರಸಭೆ ಸರ್ಕಲ್ ಮೂಲಕ ಹಾದು ಉತ್ಸವ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣ ತಲುಪಿತು. ಜಾನಪದ ಕಲಾ ತಂಡಗಳು , ವಿವಿಧ ಇಲಾಖೆಗಳ ಸ್ತಬ್ದ ಚಿತ್ರಗಳು ಮೆರವಣಿಗೆಗೆ ಮೆರಗು ನೀಡಿದವು. ದಾರಿಯುದ್ದಕ್ಕೂ ಸಹಸ್ರಾರು ಮಂದಿ ಉತ್ಸವವನ್ನು ಕಣ್ತುಂಬಿಕೊಂಡರು