ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್ ಹಾಕದವರಿಗೆ ದಂಡ: ತಹಶೀಲ್ದಾರ್

ಕೊರೊನಾ ಹೆಚ್ಚಾದರೆ ಭಾನುವಾರ ಲಾಕ್‌ಡೌನ್
Last Updated 5 ಅಕ್ಟೋಬರ್ 2020, 16:23 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಪ್ರತಿನಿತ್ಯ ಅತ್ಯಧಿಕ ಕೋವಿಡ್‌ ಪ್ರಕರಣ ವರದಿಯಾಗುತ್ತಿರುವ ಕಾರಣ ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಎಂ‌.ಶಿವಮೂರ್ತಿ ತಿಳಿಸಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸೋಮವಾರ ಪಟ್ಟಣದ ವರ್ತಕರು, ಹೋಟೆಲ್ ಮಾಲೀಕರು, ಮಾಂಸದಂಗಡಿ ಮಾಲೀಕರು ಹಾಗೂ ಬ್ಯಾಂಕ್ ಗಳ ವ್ಯವಸ್ಥಾಪಕರು ಸೇರಿದಂತೆ ವಿವಿಧ ವರ್ತಕರು, ವಿತರಕರ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ಬೇರೆ ತಾಲ್ಲೂಕಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕಿತರು ಹಾಗೂ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಜನಜಂಗುಳಿ ಹೆಚ್ಚಾಗಿ ಸೇರುವದು, ಹೆಚ್ಚು ಜನರನ್ನು ಸೇರಿಸಿಕೊಂಡು ಸಭೆ – ಸಮಾರಂಭ ನಡೆಸುವುದು, ಮಾಸ್ಕ್ ಧರಿಸದೆ ಓಡಾಡುವದು, ಅದ್ಧೂರಿ ಮದುವೆ, ಪರ ಹಾಗೂ ಬೀಗರೂಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಚಂದಗೋನಳ್ಳಮ್ಮ ಕ್ಷೇತ್ರದಲ್ಲಿ ಛತ್ರಗಳನ್ನು ಬಂದ್ ಮಾಡಿಸಲಾಗಿದ್ದು ಪರ ನಡೆಸುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.

ಪ್ರಕರಣ ಕಡಿಮೆಯಾಗದಿದ್ದರೆ ಪ್ರತಿ ಭಾನುವಾರ ಪಟ್ಟಣವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ಆದ್ದರಿಂದ ಸಾರ್ವಜನಿಕರು, ಅಂಗಡಿ- ಹೋಟೆಲ್ ಮತ್ತು ಬೀದಿ ಬದಿಯ ವ್ಯಾಪರಸ್ಥರು ಮತ್ತು ಮಾಲೀಕರು ಸಹಕರಿಸುವಂತೆ ಮನವಿ ಮಾಡಿದರು.

ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಅಂಗಡಿ ಮುಂಗಟ್ಟು, ಹೋಟೆಲ್‌ಗೆ ಬರುವ ಗ್ರಾಹಕರು ಅಂತರವನ್ನು ಕಾಪಾಡಿಕೊಂಡು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಜ್ವರ ಪರೀಕ್ಷಾ ಯಂತ್ರದಿಂದ ಗ್ರಾಹಕರ ಪರೀಕ್ಷೆ ಮಾಡಿ, ಸ್ಯಾನಿಟೈಸರ್ ನೀಡಿದ ನಂತರವಷ್ಟೇ ಗ್ರಾಹಕರೊಂದಿಗೆ ವ್ಯವಹರಿಸಬೇಕು. ಕೊರೊನಾ ನಿಯಂತ್ರಣ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಅಂಗಡಿ ಮುಂಗಟ್ಟುಗಳನ್ನು ಕಡ್ಡಾಯವಾಗಿ ಬಂದ್ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೋಟೆಲ್‌ಗಳು, ಕ್ಯಾಂಟೀನ್‌ಗಳು ಹಾಗೂ ರಸ್ತೆ ಬದಿಯ ಪಾನಿಪುರಿ ಗಾಡಿಗಳು ಸ್ವಚ್ಛತೆಯನ್ನು ಕಾಪಾಡಬೇಕು. ಕುಡಿಯಲು ಬಿಸಿನೀರು ಹಾಗೂ ಕೈಗೆ ಸ್ಯಾನಿಟೈಸರ್ ನೀಡಬೇಕು. ಮಾಸ್ಕ್ ಧರಿಸದೇ ಅಡ್ಡಾಡುವವರಿಗೆ ಕಡ್ಡಾಯವಾಗಿ ದಂಡ ವಿಧಿಸಲಾಗುವುದು ಎಂದರು. ಪರಿಸರ ಎಂಜಿನಿಯರ್ ರುದ್ರೇಗೌಡ, ಆರೋಗ್ಯ ಪರಿವೀಕ್ಷಕರಾದ ಅಶೋಕ್, ನರಸಿಂಹಶೆಟ್ಟಿ, ಕೆ.ಎಸ್.ರಾಜೇಶ್, ಅರವಿಂದ ಕಾರಂತ್, ಧರ್ಮೇಂದ್ರ ಸಿರ್ವಿ, ಕೆ.ಪಿ.ಜಯಂತ್, ಕೆ.ಆರ್.ಚಂದ್ರಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT