ಮಂಡ್ಯ: ತಾಲ್ಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿತ್ಯ ರಾಷ್ಟ್ರಧ್ವಜ ಹಾರಿಸುತ್ತಿಲ್ಲ, ತಕ್ಷಣ ಕ್ರಮ ವಹಿಸದಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಮ್ಮನಾಯಕನಹಳ್ಳಿ ಗ್ರಾ.ಪಂ.ಸದಸ್ಯ ಅನಿಲ್ಕುಮಾರ್ ಎಚ್ಚರಿಕೆ ನೀಡಿದರು.
ಪಂಚಾಯಿತಿ ಕಚೇರಿಯ ಆವರಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ಪ್ರತಿದಿನ ರಾಷ್ಟ್ರಧ್ವಜ ಬೆಳಿಗ್ಗೆ ಹಾರಾಟ ಮಾಡಿ, ಸಂಜೆಗೆ ಇಳಿಸಿ, ಧ್ವಜ ಸಂಹಿತೆ ಪ್ರಕಾರ ನಡೆದುಕೊಳ್ಳಬೇಕಿದೆ, ಆದರೆ ಗ್ರಾ.ಪಂ.ಪಿಡಿಒ ಅವರ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.
‘ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇಂತಹ ಅಗೌರವ ತೋರುವ ಕೃತ್ಯಗಳು ನಡೆಯುತ್ತಿವೆ. ನಿಯಮಾನುಸಾರ ರಾಷ್ಟ್ರಧ್ವಜ ಹಾರಿಸಲಿಕ್ಕೆ ಮತ್ತು ಇಳಿಸಲಿಕ್ಕೆ ನಿತ್ಯ ಭತ್ಯೆ ಕೊಡಲಾಗುತ್ತಿದೆ. ಜವಾಬ್ದಾರಿ ಪಡೆದವರು ಇಂತಹ ಲೋಪಗಳನ್ನು ಮಾಡಿ, ರಾಷ್ಟ್ರಧ್ವಜ ಹಾರಟದ ಸಂಹಿತೆಗೆ ಧಕ್ಕೆ ತರಲಾಗುತ್ತಿದೆ’ ಎಂದು ದೂರಿದರು.
ಡಿಸೆಂಬರ್ ತಿಂಗಳಿಂದ ಧ್ವಜ ಹಾರಿಸದೇ ಅಗೌರವ ತೋರಿದ್ದಾರೆ, ಇದಕ್ಕೆ ಸಂಬಂಧಪಟ್ಟವರ ಮೇಲೆ ಕ್ರಮ ಆಗದಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದರು.