ಶ್ರೀರಂಗಪಟ್ಟಣ: ಪಟ್ಟಣದ ಸೆಂದಿಲ್ ಕೋಟೆ ಆವರಣಲ್ಲಿ ಭಾನುವಾರ ನಡೆದ ನಾಡ ಕುಸ್ತಿ ಪಂದ್ಯಾವಳಿ ರಂಜಿಸಿತು.
ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘವು, ಮಾಚಿದೇವರ ಜಯಂತಿ ನಿಮಿತ್ತ ಕುಸ್ತಿ ಪಂದ್ಯಾವಳಿ ಏರ್ಪಡಿಸಿತ್ತು.
ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಟೂರ್ನಿಗೆ ಚಾಲನೆ ನೀಡಿದರು.
‘ಕೊರೊನಾ ಭೀತಿಯಿಂದಾಗಿ ಒಂದು ವರ್ಷದಿಂದ ಪಟ್ಟಣದಲ್ಲಿ ಕುಸ್ತಿ ನಡೆದಿರಲಿಲ್ಲ. ಮಡಿವಾಳ ಮಾಚಿದೇವರ ಸಂಘ ಧೈರ್ಯ ಮಾಡಿ ಕುಸ್ತಿ ಏರ್ಪಡಿಸಿದೆ. ಕಂಠೀರವ ನರಸರಾಜ ಒಡೆಯರ್ ಕಾಲದಲ್ಲಿ ಕುಸ್ತಿ ಉತ್ತುಂಗದ ಸ್ಥಿತಿಯಲ್ಲಿತ್ತು. ಈ ಗಂಡು ಕಲೆ ಮುಂದಿನ ಪೀಳಿಗೆಗೂ ಉಳಿಯಬೇಕು’ ಎಂದು ಅವರು ಹೇಳಿದರು.
ಟೂರ್ನಿಯಲ್ಲಿ 30ಕ್ಕೂ ಹೆಚ್ಚು ಜತೆ ಪೈಲ್ವಾನರು ಸೆಣೆಸಾಟ ನಡೆಸಿದರು.
ಮೈಸೂರಿನ ಹೈದರಾಲಿ ಮತ್ತು ಗಂಜಾಂನ ತೇಜ್ ಮಿರಿಂಡಾ ನಡುವೆ 20 ನಿಮಿಷಗಳ ಕಾಲ ನಡೆದ ಕುಸ್ತಿ ಗಮನ ಸೆಳೆಯಿತು. ಈ ಪಂದ್ಯದಲ್ಲಿ ತೇಜ್ ಮಿರಿಂಡಾ ಜಯಗಳಿಸಿದರು.
ಬನ್ನೂರಿನ ಮನೋಜ್ಗೌಡ ಮತ್ತು ಅರಳಕುಪ್ಪೆಯ ನವೀನ್ ನಡುವೆ ನಡೆದ ಕುಸ್ತಿ ರೋಚಕವಾಗಿತ್ತು. ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.
ಕುಸ್ತಿ ಪಂದ್ಯಾವಳಿ ವೀಕ್ಷಿಸಲು ವಿವಿಧ ಊರುಗಳಿಂದಲೂ ಕುಸ್ತಿ ಪ್ರಿಯರು ಆಗಮಿಸಿದ್ದರು.
ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಮರಳಾಗಾಲ ಮಂಜುನಾಥ್, ಮಜ್ಜಿಗೆಪುರ ಶ್ರೀನಿವಾಸ್, ಪೈ.ಬಾಲು, ಬೆಳಗೊಳ ಸುರೇಶ್, ಪಾಲಹಳ್ಳಿ ನರಸಿಂಹ ಇತರರು ಇದ್ದರು.