ಮೈಸೂರು: ನಗರದಲ್ಲಿ ಶನಿವಾರವೂ 2 ಮರಗಳು ಧರೆಗುರುಳಿದ್ದು, 2 ದಿನಗಳಲ್ಲಿ 3 ಮರಗಳು ಉರುಳಿ ಬಿದ್ದಿವೆ.
ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)ದಲ್ಲಿ ಬೃಹತ್ ಗಾತ್ರದ ಮರವೊಂದು ಮುಂಜಾನೆ ಉರುಳಿದೆ. ಈ ಸಮಯದಲ್ಲಿ ಹೆಚ್ಚಿನ ವಾಹನ ಸಂಚಾರ ಇಲ್ಲದೇ ಇದ್ದುದ್ದರಿಂದ ಯಾವುದೇ ಅನಾಹುತ ಆಗಿಲ್ಲ.
ನಂಜನಗೂಡು ಮುಖ್ಯರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಕಾಲೇಜು ಸಮೀಪದ ವೃತ್ತದಲ್ಲಿ ಸಂಜೆ ಮರವೊಂದು ಉರುಳಿ ಬಿದ್ದಿದೆ. ಇದು ವಿದ್ಯುತ್ ಕಂಬದ ಮೇಲೆ ಬಿದ್ದುದ್ದರಿಂದ ಕಂಬ ಬಾಗಿದೆ. ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.
ಎರಡು ಕಡೆಯೂ ಪಾಲಿಕೆ ಅಭಯ್ ರಕ್ಷಣಾ ತಂಡ ಕಾರ್ಯಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿತು. ಶುಕ್ರವಾರವಷ್ಟೇ ವಿ.ವಿ.ಮೊಹಲ್ಲಾದ ಲಾಯಲ್ ವರ್ಲ್ಡ್ ಬಳಿ ಮರವೊಂದು ಉರುಳಿ ಕಾರು ಜಖಂಗೊಂಡಿತ್ತು.
ಮಳೆ, ಗಾಳಿ ಇಲ್ಲದಿದ್ದರೂ ಮರಗಳು ಇದ್ದಕ್ಕಿದ್ದಂತೆ ಉರುಳಿ ಬೀಳುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.