ಮೈಸೂರು: ಮಕ್ಕಳ ಪ್ರತಿಭಾ ಪ್ರದರ್ಶನವನ್ನು ಪೋಷಕರು, ಶಿಕ್ಷಕರು ವೀಕ್ಷಿಸುವುದು ಸಾಮಾನ್ಯ. ಆದರೆ, ಇಲ್ಲಿ ಮಕ್ಕಳೇ ತಮ್ಮ ಪೋಷಕರ ಹಾಗೂ ಶಿಕ್ಷಕರ ಪ್ರತಿಭೆಗಳನ್ನು ಕಣ್ತುಂಬಿಕೊಂಡರು. ಅವರ ಗಾಯನಕ್ಕೆ, ನರ್ತನಕ್ಕೆ, ಅಭಿನಯಕ್ಕೆ ಮನಸೋತು ಚಪ್ಪಾಳೆ ತಟ್ಟಿದರು.
ಇಂತಹದ್ದೊಂದು ಅಪರೂಪದ ಹಾಗೂ ವಿಶಿಷ್ಟವಾದ ದೃಶ್ಯಗಳು ಶನಿವಾರ ಅರಿವು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಿದ್ದ ‘ಅರಿವು ಹಬ್ಬ’ದಲ್ಲಿ ಕಂಡು ಬಂತು.
ಇಲ್ಲಿ ಮಕ್ಕಳು ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಲಿಲ್ಲ. ಕೇವಲ ಪ್ರೇಕ್ಷಕರಾಗಿಯಷ್ಟೇ ಕುಳಿತರು. ಇವರ ಪೋಷಕರು ಹಾಗೂ ಶಿಕ್ಷಕರು ವಿವಿಧ ತಂಡಗಳನ್ನಾಗಿ ರಚಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಮೊದಲಿಗೆ ಪೋಷಕರ ತಂಡವು ವಚನ ಗಾಯನವನ್ನು ಪ್ರಸ್ತುತಪಡಿಸಿದರೆ, ನಂತರ ಶಿಕ್ಷಕರ ತಂಡವು ಜಾನಪದ ನೃತ್ಯವನ್ನು ಪ್ರದರ್ಶಿಸಿ ಮಕ್ಕಳಿಗೆ ಭರಪೂರ ಮನರಂಜನೆ ಒದಗಿಸಿದರು.
ಪೋಷಕರ ವಿವಿಧ ತಂಡಗಳಿಂದ ಹಾಡುಗಳು ಹಾಗೂ ನೃತ್ಯಗಳು ಪ್ರದರ್ಶನಗೊಂಡವು. ಮನೋಹರ ಅವರು ಬರೆದು ನಿರ್ದೇಶಿಸಿದ್ದ ‘ಜಸ್ಟ್ ಮಿಸ್’ ನಾಟಕವನ್ನು ಪೋಷಕರು ಹಾಗೂ ಶಿಕ್ಷಕರು ಪ್ರದರ್ಶಿಸಿದರು.
ವರ್ಷಪೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದವರಿಗೆ ರಂಗಕರ್ಮಿ ಜಯರಾಮಪಾಟೀಲ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.