ಮೈಸೂರು: ‘ಬಹುಜನ ಸಮಾಜ ಪಕ್ಷಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವ ಅವಕಾಶ ಇದ್ದು, ಸಂಘಟನೆಯಲ್ಲಿ ಕಾರ್ಯಕರ್ತರು ಹೆಚ್ಚು ತೊಡಗಿಸಿಕೊಳ್ಳಬೇಕು’ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಿಎಸ್ಪಿ ಕಾರ್ಯಕರ್ತರು ಎಂದರೆ ಅಧಿಕಾರಕ್ಕಾಗಿ ತಮ್ಮನ್ನು ಮಾರಿಕೊಂಡ ಶಾಸಕರಲ್ಲ. ಬಹುಜನ ಚಳವಳಿಯನ್ನು ನಂಬಿದವರು’ಎಂದು ಶಾಸಕ ಎನ್.ಮಹೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
‘ಬಹುಜನ ಚಳವಳಿಯು ಶಾಸಕರೊಬ್ಬರನ್ನು ಸೂಟು–ಬೂಟು ಹಾಕಿಸಿ ವಿಧಾನಸಭೆಗೆ ಕಳುಹಿಸಿತ್ತು. ಇದೀಗ ಅವರು ಅಧಿಕಾರಕ್ಕಾಗಿ ಸೂಟು ಬೂಟು ಕಳಚಿ ಚಡ್ಡಿ ತೊಟ್ಟು ಚಳವಳಿಗೇ ಸವಾಲು ಹಾಕುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಪಕ್ಷಕ್ಕೆ ಸವಾಲೆಸೆದಿರುವವರಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಮೂಲಕ ಕಾರ್ಯಕರ್ತರು ಪಾಠ ಕಲಿಸಬೇಕು’ ಎಂದರು.