ಮೈಸೂರು: ಜಿಲ್ಲೆಯಲ್ಲಿ ಕೋವಿಡ್–19 ಪ್ರಕರಣ ಉಲ್ಬಣಿಸಿದ್ದು, ಒಂದೇ ದಿನ 151 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಜೊತೆಗೆ ಸೋಂಕಿನಿಂದ ಆರು ಮಂದಿ ಮೃತಪಟ್ಟಿದ್ದಾರೆ.
ಲಾಕ್ಡೌನ್ ಮಾಡಬೇಕೇ ಬೇಡವೇ ಎಂಬ ಗೊಂದಲ ಏರ್ಪಟ್ಟಿದ್ದು, ಜಿಲ್ಲೆಯಲ್ಲಿ ಒಂದೇದಿನ ದಾಖಲಾದ ಅತಿ ಹೆಚ್ಚಿನ ಸೋಂಕಿನ ಪ್ರಕರಣ ಇದಾಗಿದೆ. ರಾಜ್ಯದಲ್ಲಿನ ಜಿಲ್ಲಾವಾರು ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೇ, ಮೃತಪಟ್ಟವರ ಒಟ್ಟು ಸಂಖ್ಯೆ 37 ಕ್ಕೇರಿದ್ದು, ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಒಟ್ಟು ಸೋಂಕಿತರ ಪ್ರಕರಣಗಳ ಸಂಖ್ಯೆ 966ಕ್ಕೇರಿದ್ದು, ಸೋಮವಾರ 54 ಮಂದಿ ಚೇತರಿಸಿಕೊಂಡಿದ್ದಾರೆ. 196 ಮಂದಿ ಸೋಂಕಿತರನ್ನು ಮನೆಯಲ್ಲೇ ಐಸೊಲೇಷನ್ ಮಾಡಲಾಗಿದೆ. 39 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ 32 ಪ್ರದೇಶವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.
ಮೈಸೂರಿನ 51 ವರ್ಷದ ಪುರುಷರೊಬ್ಬರು ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 68 ವರ್ಷದ ವೃದ್ಧ, 76 ವರ್ಷದ ವೃದ್ಧ, 52 ವರ್ಷದ ಪುರುಷ, 70 ವರ್ಷದ ವೃದ್ಧ, 52 ವರ್ಷದ ಪುರುಷ ಮೃತಪಟ್ಟವರು. ಎಲ್ಲರೂ ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್ಎಆರ್ಐ) ಬಳಲುತ್ತಿದ್ದರು.
ಪ್ರಾಥಮಿಕ ಸಂಪರ್ಕಿತ 41 ಮಂದಿಯಲ್ಲಿ ಕೋವಿಡ್–19 ಇರುವುದು ದೃಢಪಟ್ಟಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್ಎಆರ್ಐ) ಬಳಲುತ್ತಿದ್ದ 16 ಮಂದಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್ಐ) ಬಳಲುತ್ತಿದ್ದ 66 ಮಂದಿ, ಇತರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ 14 ಮಂದಿಯಲ್ಲಿ ಸೋಂಕು ಇರುವುದು ಗೊತ್ತಾಗಿದೆ. 14 ಮಂದಿಯಲ್ಲಿ ಯಾವುದೇ ರೋಗ ಲಕ್ಷಣ ಇಲ್ಲ.
ಜಿಲ್ಲೆಯಲ್ಲಿ 2,562 ಮಂದಿಯನ್ನು 14 ದಿನಗಳ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇದುವರೆಗೆ ಒಟ್ಟು 28,439 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.