ಮೈಸೂರು: ‘ಭಕ್ತಿಯೇ ಪ್ರಧಾನವಾದ ಶ್ರೀಕೃಷ್ಣ ಪಾರಿಜಾತವು ಕಲಾವಿದರ ಅರ್ಪಣಾ ಶಕ್ತಿಯಿಂದ ರೂಪುಗೊಂಡ ಬಯಲಾಟ’ ಎಂದು ಡಾ.ಶ್ರೀರಾಮ ಇಟ್ಟಣ್ಣವರ ಹೇಳಿದರು.
ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ‘ಶ್ರೀಕೃಷ್ಣ ಪಾರಿಜಾತ: ಭಕ್ತಿಯ ಚಹರೆಗಳು’ ಕುರಿತು ಅವರು ಮಾತನಾಡಿದರು.
‘ಜೈನ, ಇಸ್ಲಾಂ ಸೇರಿದಂತೆ ವಿವಿಧ ಸಮುದಾಯ ಗಳಿಗೆ ಸೇರಿದ ನೂರಾರು ಕಲಾವಿ ದರು ಕೃಷ್ಣ ತತ್ವವನ್ನು ಪಾರಿಜಾತ ಬಯಲಾಟದ ಮೂಲಕ ಜನರಿಗೆ ತಲುಪಿಸಿದರು. ಕೃಷ್ಣ ಭಕ್ತಿಯೊಂದೇ ಅವರ ಉಸಿರಾಗಿತ್ತು’ ಎಂದರು.
‘ಮದುವೆ ನಂತರ ಪಾರಿಜಾತ ಬಯಲಾಟ ಏರ್ಪಡಿಸುವುದು ಉತ್ತರ ಕರ್ನಾಟಕದಲ್ಲಿ ವಾಡಿಕೆ. ಕೊಲ್ಹಾಪುರದ ರಾಮಣ್ಣ, ಹುಕ್ಕೇರಿ ಸಿದ್ದರಾಮಪ್ಪ, ಲಿಂಗವ್ವ ಮೊದಲಾದ ಕಲಾವಿದರ ಅರ್ಪಣಾ ಮನೋಭಾವದಿಂದ ಬಯಲಾಟ ಜನರ ಮನದಲ್ಲಿ ನೆಲೆಯೂರಿದೆ’ ಎಂದು ಹೇಳಿದರು.
‘ಸತ್ಯಭಾಮೆಯ ಮಾನವೀಯ ಗುಣಗಳಿಂದಾಗಿ ಪಾರಿಜಾತ ಜನಪ್ರಿಯತೆ ಪಡೆದಿದೆ. ಕೀರ್ತನೆ ಶೈಲಿಯಲ್ಲಿರುವ ನಾಟಕದಲ್ಲಿ ಭಕ್ತಿ– ಅಧ್ಯಾತ್ಮದ ವಿವೇಚನಾತ್ಮಕ ಹುಡುಕಾಟವಿದೆ. ಕಲಾವಿದರೇ ಅವಕಾಶ ಸಿಕ್ಕಾಗಲೆಲ್ಲ ಕೃಷ್ಣ ಭಕ್ತಿಯ ಸ್ವ–ಅನುಭವವನ್ನು ನಾಟಕದಲ್ಲಿ ಹಂಚಿಕೊಳ್ಳುತ್ತಾರೆ’ ಎಂದು ತಿಳಿಸಿದರು.
ಯೋಜನಾ ನಿರ್ದೇಶಕ ಪ್ರೊ.ಶಿವರಾಮ ಶೆಟ್ಟಿ, ಹಿರಿಯ ಫೆಲೋ ಡಾ.ಎಂ.ಕನ್ನಿಕಾ ಇದ್ದರು.