ಮೈಸೂರು: ಇಲ್ಲಿನ ಎಚ್.ಡಿ.ಕೋಟೆ ಹಾಗೂ ಕೇರಳದ ಗಡಿಭಾಗವಾದ ಉದ್ಬೂರು ಬಳಿಯ ಮಾನಂದವಾಡಿ ರಸ್ತೆಯಲ್ಲಿ ಆನೆಗಳ ಹಿಂಡೊಂದು ಸೋಮವಾರ ಕಾಣಿಸಿಕೊಂಡು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಈ ಕುರಿತ ವಿಡಿಯೊ ವಾಟ್ಸ್ಆ್ಯಪ್ಗಳಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ.
ಒಟ್ಟು ಮೂರು ಆನೆಗಳು ಈ ಹಿಂಡಿನಲ್ಲಿವೆ. ಇವುಗಳು ನಿಧಾನವಾಗಿ ಹೆಜ್ಜೆ ಇಡುತ್ತ ಸಾಗುತ್ತಿದ್ದಾಗ ವಾಹನ ಸವಾರರು ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು.
ಆನೆಗಳು ತೆರಳಿದ ನಂತರ ವಾಹನ ಸಂಚಾರ ಯಥಾಸ್ಥಿತಿಗೆ ಬಂದಿತು. ಇದು ಅಂತರಸಂತೆ ವನ್ಯಜೀವಿ ವಲಯಕ್ಕೆ ಬರುತ್ತದೆ. ಅಕ್ಕಪಕ್ಕ ದಟ್ಟ ಅರಣ್ಯವಿದ್ದು, ಆನೆಗಳು ಸೇರಿದಂತೆ ಅನೇಕ ವನ್ಯಜೀವಿಗಳು ಇಲ್ಲಿವೆ. ಹಾಗಾಗ್ಗೆ, ಇವುಗಳು ರಸ್ತೆಗೆ ಬರುವುದು ಸಹಜ ಎಂದು ಅರಣ್ಯ ರಕ್ಷಕರೊಬ್ಬರು ತಿಳಿಸಿದರು.