ಮೈಸೂರು: ಕೋವಿಡ್–19 ಸೋಕಿನಿಂದ ಗುಣಮುಖರಾಗಲು ಚಿಕಿತ್ಸೆಗಿಂತ ಮೊದಲು ನಮ್ಮ ಮನಸ್ಥಿತಿಯೇ ಪರಿಣಾಮಕಾರಿ ಮದ್ದಾಗಿ ಕೆಲಸ ಮಾಡಬೇಕು.
ಯಾವಾಗ ನಮ್ಮ ಮನಸ್ಸು ಸಮಚಿತ್ತದಲ್ಲಿರುತ್ತೆ, ಆಗ ಎಲ್ಲವೂ ಪರಿಣಾಮಕಾರಿ. ಗೊಂದಲ, ದ್ವಂದ್ವ, ಭಯ, ಆತಂಕದಲ್ಲಿ ಮುಳುಗಿದರೆ; ಐಸಿಯುಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಪ್ರಯೋಜನಕ್ಕೆ ಬಾರದು. ದಿನೇ ದಿನೇ ಆರೋಗ್ಯ ಕ್ಷೀಣಿಸಿ, ಜೀವ ಹೋಗೋ ಅಪಾಯವೇ ಹೆಚ್ಚು.
ನಾನು–ನನ್ನ ತಂದೆ ಇಬ್ಬರೂ ಕೋವಿಡ್ ಪೀಡಿತರಾದೆವು. ಆರಂಭದ ದಿನಗಳಲ್ಲಿ ಕೆಮ್ಮು, ಕಫ ನಿಯಂತ್ರಣಕ್ಕೆ ಬರಲಿಲ್ಲ. ಇನ್ನಿತರ ಸಮಸ್ಯೆಯೂ ಒಟ್ಟಾಗಿ ಬಾಧಿಸಿದವು. ದಿನ ಕಳೆದಂತೆ ಸಮಸ್ಯೆ ಕೈ ಮೀರುವ ಹಂತಕ್ಕೆ ತಲುಪುತ್ತಿತ್ತು. ತಕ್ಷಣವೇ ದೃಢ ನಿರ್ಧಾರ ಮಾಡಿದೆವು. ಯಾವುದೇ ಕಾರಣಕ್ಕೂ ಅಂಜಬಾರದು ಎಂಬ ತೀರ್ಮಾನ ತೆಗೆದುಕೊಂಡವು. ಆಗಿನಿಂದ ನಮ್ಮಿಬ್ಬರ ಆರೋಗ್ಯದ ಚಿತ್ರಣವೇ ಬದಲಾಯಿತು.
ವೈದ್ಯರು ಕೊಟ್ಟ ಔಷಧಿಯನ್ನು ಆಯಾ ಸಮಯಕ್ಕೆ ತೆಗೆದುಕೊಂಡೆವು. ಜೊತೆಗೆ ಮನೆಯಲ್ಲೇ ಹಾಲು, ಶುಂಠಿ, ಅರಿಸಿನ, ಕಾಳು ಮೆಣಸಿನ ಪುಡಿ ಮಿಶ್ರಣದ ಕಷಾಯವನ್ನು ಚೆನ್ನಾಗಿ ಕುದಿಸಿ, ಬೆಳಿಗ್ಗೆ–ಸಂಜೆ ಒಂದೊಂದು ಲೋಟ ಕುಡಿದೆವು. ಬಿಸಿ ಬಿಸಿ ಊಟ ಮಾಡಿದೆವು. ಬಿಸಿ ನೀರು ಕುಡಿದುಕೊಂಡು ದಿನ ಕಳೆದವು. ಇದೀಗ ಎಂದಿನ ಆರೋಗ್ಯ ನಮ್ಮದಾಗಿದೆ. ಯಾವೊಂದು ಸಮಸ್ಯೆಯೂ ಕಾಡುತ್ತಿಲ್ಲ. ಚೇತರಿಸಿಕೊಂಡಿದ್ದೇವೆ.
ಮನೆಯಲ್ಲೇ ಬಂಧಿಗಳಾಗಿದ್ದಾಗ, ಕೋವಿಡ್ ಪೀಡಿತರಾಗಿದ್ದ ಗೆಳೆಯರ ಜೊತೆ ಮೊಬೈಲ್ನಲ್ಲೇ ಮಾತನಾಡಿಕೊಂಡು, ನಮಗೆ ನಾವೇ ಧೈರ್ಯ ಹೇಳಿಕೊಂಡೆವು. ಪರಸ್ಪರರ ಆರೋಗ್ಯ ಸ್ಥಿತಿಯ ಬಗ್ಗೆ ಆಗಾಗ್ಗೆ ವಿಚಾರಿಸಿಕೊಂಡು, ಮಾಹಿತಿ ವಿನಿಮಯ ಮಾಡಿಕೊಂಡೆವು. ಒಬ್ಬರೊಬ್ಬರು ಒಂದೊಂದು ಮನೆ ಮದ್ದು, ಸಲಹೆ ಕೊಟ್ಟುಕೊಂಡೆವು. ಅದರಂತೆ ಎಲ್ಲವನ್ನೂ ಸಮಚಿತ್ತದಿಂದ ನಿಭಾಯಿಸಿ ಗುಣಮುಖರಾದೆವು.