ಮೈಸೂರು: ನಗರದ ಚಾಮುಂಡಿಪುರಂ ವೃತ್ತದಲ್ಲಿನ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಜನಮನ ವೇದಿಕೆ ವತಿಯಿಂದ ಸೋಮವಾರ ಕಾದಂಬರಿಗಾರ್ತಿ ಗೀತಾ ನಾಗಭೂಷಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾಹಿತ್ಯ ಕ್ಷೇತ್ರದ ವಿವಿಧ ಪ್ರಮುಖರು ‘ಹಲವು ಪ್ರಥಮಗಳ ಶ್ರೇಷ್ಠ ಸಾಹಿತಿ, ಚಿಂತಕಿ ಡಾ.ಗೀತಾ ನಾಗಭೂಷಣ್, ಕಲ್ಯಾಣ ಕರ್ನಾಟಕದ ಪ್ರಮುಖ ಲೇಖಕಿ’ ಎಂದೇ ಖ್ಯಾತರಾಗಿದ್ದರು ಎಂದು ನೆನಪಿಸಿಕೊಂಡರು.
‘ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದು ನಿಷಿದ್ಧ ಎನ್ನುವ ಪರಿಸರದಲ್ಲಿ ದೃಢ ಸಂಕಲ್ಪ, ಹೋರಾಟದ ಮನೋಭಾವನೆ ಮೂಲಕ ಉನ್ನತ ಶಿಕ್ಷಣ ಪಡೆದವರು. ದಲಿತ ಬಂಡಾಯದ ಪ್ರಥಮ ಮಹಿಳಾ ಸಾಹಿತಿ ಎಂದೇ ಗುರುತಿಸಲ್ಪಟ್ಟವರು. ತಮ್ಮ ಅಧ್ಯಯನದ ನಡುವೆ ಸಮಾಜಕ್ಕೆ ಬೆಳಕು ಚೆಲ್ಲುವ ಕಾರ್ಯದಲ್ಲಿ ನಿರಂತರವಾಗಿ ಪ್ರಯತ್ನಶೀಲರಾದವರು. ಸಾಹಿತ್ಯದ ಉದ್ದಕ್ಕೂ ಮಹಿಳೆಯ ಗುರುತಿಸುವಿಕೆ, ಅವಮಾನ, ದೌರ್ಜನ್ಯದ ಕುರಿತು ಲೇಖನಿಯನ್ನೇ ತಮ್ಮ ಅಸ್ತ್ರವಾಗಿಸಿಕೊಂಡಿದ್ದರು’ ಎಂದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಮಹಿಳಾ ಸಾಹಿತಿ, ನಾಡೋಜ ಪುರಸ್ಕೃತ ಮೊದಲ ಮಹಿಳಾ ಸಾಹಿತಿ, ಸಾಹಿತ್ಯ ಅಕಾಡೆಮಿಯ ಮೊದಲ ಮಹಿಳಾ ಅಧ್ಯಕ್ಷೆ ಎಂಬುದು ಸೇರಿದಂತೆ ಹೀಗೆ ಹಲವು ಪ್ರಥಮಗಳ ದಾಖಲೆ ಗೀತಾ ನಾಗಭೂಷಣ ಅವರಿಗಿದೆ ಎಂದು ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಜನಮನ ವೇದಿಕೆ ಅಧ್ಯಕ್ಷ, ನಗರಪಾಲಿಕೆ ಸದಸ್ಯ ಮಾ.ವಿ.ರಾಮ್ಪ್ರಸಾದ್, ಮಧು ಎನ್.ಪೂಜಾರಿ, ಸುಚಿಂದ್ರ, ಶಿವಪ್ರಕಾಶ್, ಕಾರ್ತಿಕ್ ನಾಯಕ್, ಚಕ್ರಪಾಣಿ, ಮೈಲಾ ವಿಜಯ್ ಕುಮಾರ್ ಉಪಸ್ಥಿತರಿದ್ದರು.