ಮೈಸೂರು: ‘ಹಡಪದ ಅಪ್ಪಣ್ಣ ಲೌಕಿಕವಾಗಿ ಮಾತ್ರವಲ್ಲದೇ ಪಾರಮಾರ್ಥಿಕವಾಗಿ ಹಿರಿಮೆ ಹೊಂದಿ ನಿಜಸುಖಿ ಎನಿಸಿಕೊಂಡರು’ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ಡಾ.ವಚನ ಕುಮಾರಸ್ವಾಮಿ ಹೇಳಿದರು.
ನಗರದ ಬೋಗಾದಿಯ ಶಾರದಾನಗರ ರೈಲ್ವೆ ಬಡಾವಣೆಯ ಶರಣು ವಿಶ್ವವಚನ ಫೌಂಡೇಷನ್ ಕಚೇರಿಯಲ್ಲಿ ನಡೆದ ಹಡಪದ ಅಪ್ಪಣ್ಣ ಅವರ 886ನೇ ಜಯಂತಿಯಲ್ಲಿ ಮಾತನಾಡಿದ ಅವರು, ‘ಹಡಪದ ಅಪ್ಪಣ್ಣನವರ ಜನನ, ಬೆಳವಣಿಗೆ ಹಾಗೂ ಕಲ್ಯಾಣಕ್ಕೆ ಯಾವಾಗ ಬಂದರು ಎಂಬುದರ ಬಗ್ಗೆ ಯಾವುದೇ ಕಾವ್ಯ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿಲ್ಲ’ ಎಂದರು.
‘ಈಚೆಗೆ ದೇವದುರ್ಗದ ದೊಡ್ಡಪ್ಪತಾತ ಅವರಲ್ಲಿ ದೊರೆತ ಕಾಗದ ಪ್ರತಿಯಲ್ಲಿನ ಮಾಹಿತಿ ಪ್ರಕಾರ, ಜೀವಣ್ಣ ಎಂಬ ಜನ್ಮನಾಮದಿಂದ ಅಪ್ಪಣ್ಣನು ಚೆನ್ನವೀರಪ್ಪ ಮತ್ತು ದೇವಮ್ಮರವರ ಏಕೈಕ ಪುತ್ರನಾಗಿ ಜನಿಸಿದ. ಇವರು ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ನಿವಾಸಿಗಳು’ ಎಂದು ಹೇಳಿದರು.