ಮೈಸೂರು: ಕೊನೆಯ ಆಷಾಢ ಮಂಗಳವಾರ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದರು.
ಚಾಮುಂಡಿಬೆಟ್ಟ ಗ್ರಾಮದಲ್ಲಿ ಊರಿನಹಬ್ಬವೂ ಇದ್ದುದ್ದರಿಂದ ಜನಸಂದಣಿ ಅತ್ಯಧಿಕವಾಗಿತ್ತು. ಆಷಾಢ ಶುಕ್ರವಾರ ದರ್ಶನ ಇರುವುದಿಲ್ಲ ಎಂಬ ಕಾರಣಕ್ಕೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದು ಕಂಡು ಬಂತು.
ಹಣ ನೀಡಿ ಟಿಕೆಟ್ ತೆಗೆದುಕೊಂಡವರೂ ಧರ್ಮ ದರ್ಶನದಂತೆ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾದ ಸ್ಥಿತಿ ಇತ್ತು. ಧರ್ಮ ದರ್ಶನದ ಸಾಲು ಮತ್ತೂ ಹೆಚ್ಚಾಗಿತ್ತು. ಚಾಮುಂಡಿಬೆಟ್ಟಕ್ಕೆ ತೆರಳುವ ಬಸ್ಗಳೂ ಜನರಿಂದ ತುಂಬಿ ತುಳುಕುತ್ತಿದ್ದವು. ದ್ವಿಚಕ್ರ ವಾಹನಗಳು, ಕಾರುಗಳ ಸಂಚಾರ ಅಧಿಕವಾಗಿತ್ತು.
ದೇವಸ್ಥಾನದ ಆವರಣದಲ್ಲಿ, ಮಹಿಷಾಸುರ ಪ್ರತಿಮೆ ಮುಂಭಾಗ ಮಾಸ್ಕ್ ಧರಿಸದೇ ಸೆಲ್ಫೀ ತೆಗೆದುಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು. ಮಾಸ್ಕ್ನ್ನು ಮರೆತ ಅನೇಕ ಮಂದಿ ಇದ್ದರು. ಬಹುತೇಕ ಕಡೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಯಿತು.