ಮೈಸೂರು: ‘ಜೆಡಿಎಸ್ ಪಕ್ಷವು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಮಗು. ಯಾರು ಮಿಠಾಯಿ ತೋರಿಸುತ್ತಾರೋ ಅವರ ಬಳಿ ಹೋಗುತ್ತದೆ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಲೇವಡಿ ಮಾಡಿದರು.
ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದ್ದರ ಕುರಿತ ಪ್ರಶ್ನೆಗೆ, ಅವರು ಈ ರೀತಿ ಪ್ರತಿಕ್ರಿಯಿಸಿದರು.
ಜನರು ನಮ್ಮನ್ನು ಕ್ಷಮಿಸಲಿ:
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಪರಿಷತ್ತಿಗೆ ವಿಶೇಷವಾದ ಸ್ಥಾನ ಇದೆ. ಮೇಲ್ಮನೆಯ ಗೌರವವನ್ನು ನಾವೆಲ್ಲರೂ ಸೇರಿ ಬೀದಿಪಾಲು ಮಾಡಿದೆವು. ನಾನು ಕೂಡ ಸದನದಲ್ಲಿ ಕುಳಿತು ಇದೆಲ್ಲವನ್ನೂ ವೇದನೆಯಿಂದ ನೋಡಬೇಕಾಯಿತು’ ಎಂದರು.
‘ಜನತಂತ್ರ ವ್ಯವಸ್ಥೆಯ ದೇವಾಲಯದ ಬಾಗಿಲನ್ನು ಬೂಟಿನಿಂದ ಒದ್ದದ್ದು ನೋವಿನ ಸಂಗತಿ. ಪ್ರಜಾಪ್ರಭುತ್ವವನ್ನು ನೀಡಿರುವ ಭಾರತಾಂಬೆ ಮತ್ತು ಅಧಿಕಾರ ಕೊಟ್ಟಂತಹ ಜನರು ನಮ್ಮನ್ನು ಕ್ಷಮಿಸಲಿ’ ಎಂದು ಹೇಳಿದರು.