ಮೈಸೂರು: ‘ಭಾರತ ದೇಶದ ಮೊದಲ ಅಹಿಂದ ಪ್ರಧಾನಿ ನರೇಂದ್ರ ಮೋದಿ. ಅಹಿಂದ, ಅಹಿಂದ ಎನ್ನುವ ಸಿದ್ದರಾಮಯ್ಯ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ಶನಿವಾರ ಇಲ್ಲಿ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ವಿರುದ್ಧ ಆಪಾದನೆ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ‘ಹಿಟ್ ಅಂಡ್ ರನ್’ ರೀತಿ ಆರೋಪ ಮಾಡಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬುದ್ಧಿಮಾತು ಹೇಳಿದರು.
‘ಒಬ್ಬರು ಮುಖ್ಯಮಂತ್ರಿಯಾಗಿದ್ದವರು, ಇನ್ನೊಬ್ಬರು ಕೇಂದ್ರ ಸಚಿವರಾಗಿದ್ದವರು. ನಿಮ್ಮಂತಹವರು ಅಪ್ರಬುದ್ಧರಾಗಿ ಮಾತನಾಡುವುದು ಸರಿಯಲ್ಲ. ದೇಶದ ಜನರು ಇದನ್ನು ಸಹಿಸಲ್ಲ’ ಎಂದು ಹರಿಹಾಯ್ದರು.
ಇತ್ತೀಚೆಗೆ ನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಿದ್ದರಾಮಯ್ಯ ಮತ್ತು ಖರ್ಗೆ ಅವರು ಪ್ರಧಾನಿ ಮೋದಿ ಅವರ ಕಾರ್ಯವೈಖರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.