ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆಯ ರೈತ ಸಂಘ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಅವರ ನಾಮಪತ್ರ ಸಲ್ಲಿಕೆಗೆ ಠೇವಣಿ ಹಣವನ್ನು ಬುಧವಾರ ಇಲ್ಲಿ ಜನರಿಂದಲೇ ಸಂಗ್ರಹಿಸಲಾಯಿತು.
ಪುರಭವನದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು, ಮಹಿಳೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ₹ 10, 20, 50, 100, 500 ಮುಖಬೆಲೆಯ ನೋಟುಗಳನ್ನು ಜೋಳಿಗೆಗೆ ಹಾಕಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಹಣ ಹಾಕಿ ಚಾಲನೆ ನೀಡಿದರು. ನಾಮಪತ್ರ ಸಲ್ಲಿಸಲು ₹ 10 ಸಾವಿರ ಬೇಕಿದ್ದು, ಹಣ ನೀಡುವಂತೆ ಮನವಿ ಮಾಡಿದರು. ಬಳಿಕ ಮುಖಂಡರು ಹಸಿರು ಟವೆಲ್ ಹಿಡಿದು ಪುರಭವನ ಆವರಣದಲ್ಲಿ ಹಣ ಸಂಗ್ರಹಿಸಿದರು. ₹ 18,500 ಸಂಗ್ರಹವಾಯಿತು.
‘ನಾನು ಚುನಾವಣಾ ಪ್ರಚಾರಕ್ಕೆ ಹೋದಲೆಲ್ಲಾ ಪದವೀಧರರು ಮತ ನೀಡುವ ಭರವಸೆ ನೀಡಿ ಹಣ ಕೂಡ ನೀಡುತ್ತಿದ್ದಾರೆ. ಇದುವರೆಗೆ ಜನರೇ ನೀಡಿದ ಹಣ ₹ 15ಲಕ್ಷ ದಾಟಿದೆ. ಅದನ್ನು ಒಳ್ಳೆಯ ಕಾರ್ಯಕ್ಕೆ ಬಳಸುತ್ತೇನೆ’ ಎಂದು ಅಭ್ಯರ್ಥಿ ಪ್ರಸನ್ನ ಎನ್.ಗೌಡ ಹೇಳಿದರು.