ಮೈಸೂರು: ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ‘ನಮ್ಮ ಭೈರಪ್ಪನವರು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ದೇಶ–ವಿದೇಶದಲ್ಲಿರುವ ಓದುಗರು, ಒಡನಾಡಿಗಳು ತಮ್ಮ ಮೇಲೆ ಭೈರಪ್ಪನವರ ಸಾಹಿತ್ಯ ಬೀರಿದ ಪ್ರಭಾವಗಳ ಕುರಿತು ಬರೆದಿರುವ ಆತ್ಮೀಯ ಲೇಖನಗಳ ಗುಚ್ಚವೇ ಈ ಪುಸ್ತಕ.
ಭೈರಪ್ಪ ನಿವಾಸದಲ್ಲೇ ಪುಸ್ತಕ ಬಿಡುಗಡೆ ಸಮಾರಂಭ ಸರಳವಾಗಿ ನಡೆಯಿತು. ವಿದ್ವಾಂಸರಾದ ಡಾ.ಪ್ರಧಾನ ಗುರುದತ್, ಸಂಪಾದಕಿ ಎಂ.ಎಸ್.ವಿಜಯಾಹರನ್, ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ, ಪ್ರಕಾಶಕ ಶ್ರೀನಿಧಿ ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.
ಪುಸ್ತಕದ ಮೊದಲ ಪ್ರತಿ ಸ್ವೀಕರಿಸಿದ ಬಳಿಕ ಭೈರಪ್ಪನವರು ಮಾತನಾಡಿ, ‘ಕಲೆಯಲ್ಲಿ ವಿದ್ವಾಂಸರು ಮತ್ತು ಹೆಚ್ಚು ವಿದ್ಯೆಯಿಲ್ಲದೆ ಇರುವಂಥವರು ಎಂಬ ದೂರವನ್ನು ಕಲ್ಪಿಸುವುದು ಕಲೆಗೂ ಒಳ್ಳೆಯದಲ್ಲ. ಜನರಿಗೂ ಒಳ್ಳೆಯದಲ್ಲ. ನಿಜವಾದ ಕಲೆ ಎಲ್ಲರಿಗೂ ಏಕ ಸಮಾನವಾಗಿ ಮುಟ್ಟಬೇಕು’ ಎಂದರು.
ಪುಸ್ತಕ ಹೊರ ತಂದಿದ್ದಕ್ಕೆ ಸಂಪಾದಕ ತಂಡ, ಪ್ರಕಾಶಕರನ್ನು ಅಭಿನಂದಿಸಿದ ಭೈರಪ್ಪ, ‘ಮುನ್ನುಡಿಯನ್ನು ಬರೆದಿರುವ ಗುರುದತ್ತರೇ ಇದನ್ನು ಬರೆದಿರುವುದರಿಂದ ಸಮಗ್ರವಾಗಿ ಇದ್ದೇ ಇರುತ್ತದೆ’ ಎಂದು ಹೇಳಿದರು.
ಪ್ರತಿಗಳಿಗಾಗಿ ಸಂಸ್ಕೃತಿ ಬುಕ್ ಪ್ಯಾರಡೈಸ್, ಮೈಸೂರು, 9886175010 ಸಂಪರ್ಕಿಸಿ.