ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಬೇಡ: ಬಿ.ಎಲ್‌.ಭೈರಪ್ಪ

ಕೆರೆಗಳ ಜಲಮೂಲಗಳ ಅಭಿವೃದ್ಧಿಗೆ ಆಗ್ರಹ
Last Updated 29 ಅಕ್ಟೋಬರ್ 2021, 10:57 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟ ಹಾಗೂ ತಪ್ಪಲಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಬಾರದು. ಬೆಟ್ಟವನ್ನು ಉಳಿಸಬೇಕು’ ಎಂದು ಮಾಜಿ ಮೇಯರ್ ಬಿ.ಎಲ್‌.ಭೈರಪ್ಪ ಆಗ್ರಹಿಸಿದರು.

‘ಸಾವಿರಾರು ವರ್ಷಗಳ ಇತಿಹಾಸವಿರುವ ಚಾಮುಂಡಿ ಬೆಟ್ಟದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ. ಬೆಟ್ಟದ ಸುತ್ತಲು ತಾವರೆಕಟ್ಟೆ ಕೆರೆ, ಕಾರಂಜಿ ಕೆರೆ, ಗೊಬ್ಬಳಿಕಟ್ಟೆ ಕೆರೆ, ಉತ್ತನಹಳ್ಳಿ ಕೆರೆ, ಅಪರಂಜಿ ಕೆರೆ, ದಳವಾಯಿ ಕೆರೆಗಳಿವೆ. ಆದರೆ, ಈ ಕೆರೆಗಳಿಗೆ ಈಗ ನೀರಿನ ಮೂಲಗಳೇ ಇಲ್ಲ. ಈ ಮೂಲಗಳನ್ನು ಪತ್ತೆ ಮಾಡಿ ಪುನರುಜ್ಜೀವನಗೊಳಿಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಬೆಟ್ಟದ ಪಾದದಿಂದ ಮೇಲಿನವರೆಗೆ 2 ಅಡಿ ನೀರಿನ ಪೈಪ್‌ ಅಳವಡಿಸಲು ಹಿಟಾಚಿ ಯಂತ್ರಗಳನ್ನು ಬಳಸಿ 10 ಅಡಿ ಆಳದವರೆಗೆ ಬಂಡೆಗಳನ್ನು ಕೀಳಲಾಗಿದೆ. ಇದರಿಂದ ಮಣ್ಣು ಸಡಿಲಗೊಂಡು ಮಳೆ ಬಂದಾಗ ಕುಸಿಯುತ್ತಿದೆ. ಬೆಟ್ಟದ ಮೇಲೆ ಇರುವ ಮನೆಗಳಿಗೆ ಒಳಚರಂಡಿ ಸಂಪರ್ಕವಿಲ್ಲ. ಪಿಟ್‌ ಗುಂಡಿಗಳನ್ನು ತೆಗೆದು ನೀರನ್ನು ಬಿಡಲಾಗುತ್ತಿದೆ. ಇದರಿಂದ ಬೆಟ್ಟಕ್ಕೆ ಹಾನಿಯಾಗುತ್ತಿದೆ’ ಎಂದರು.

‘ತಾವರೆಕಟ್ಟೆ ಸರ್ಕಲ್‌ನಿಂದ ನಂದಿವರೆಗೆ, ನಂದಿಯಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆ, ನಂದಿಯಿಂದ ಉತ್ತನಹಳ್ಳಿಗೆ ಹೋಗುವ ರಸ್ತೆಗಳು ಕಿರಿದಾಗಿವೆ. ಈ ರಸ್ತೆಗಳನ್ನು ಕಾಂಕ್ರೀಟ್‌ನಿಂದ ನಿರ್ಮಿಸಬೇಕು. ಭಾರಿ ವಾಹನ ಓಡಾಟವನ್ನು ನಿರ್ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಬೆಟ್ಟ ಹತ್ತುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಬೆಟ್ಟದ ತಪ್ಪಲಿನಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಬಾರದು. ಲಲಿತಾದ್ರಿನಗರ ಬಡಾವಣೆಯಲ್ಲಿ ಗುಂಪು ಮನೆ ಯೋಜನೆ ಹಾಗೂ ಬೆಟ್ಟಕ್ಕೆ ರೋಪ್‌ ವೇ ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT