ಮೈಸೂರು: ವ್ಯಕ್ತಿಯನ್ನು ಲಿಂಗಾಧಾರಿತವಾಗಿ ಗುರುತಿಸದೇ ಅವರ ವ್ಯಕ್ತಿತ್ವದಿಂದ ಗುರುತಿಸಬೇಕು ಎಂದು ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಬಳಕೆ ಮಾಡಿಕೊಳ್ಳಬೇಕು. ಆಗ ಎಂತಹುದೇ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದು. ಸಿಕ್ಕಂತಹ ಅವಕಾಶಗಳನ್ನು ಬಿಡದೇ ಸವಾಲಾಗಿ ಸ್ವೀಕರಿಸಿ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಆತ್ಮವಿಶ್ವಾಸ ಇಮ್ಮಡಿಸುತ್ತದೆ ಎಂದರು.
ಸಮಾನತೆ ಎಂಬುದು ಒಂದು ಸಾಮಾಜಿಕ ಮನಸ್ಥಿತಿಯಾಗಿದೆ. ಪುರುಷ ಮತ್ತು ಮಹಿಳೆಯ ನಡುವೆ ಸಮಾನತೆ ಬರಬೇಕಿದೆ ಎಂದು ಹೇಳಿದರು.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇದ್ದಂತೆ, ಯಶಸ್ವಿ ಮಹಿಳೆಯ ಹಿಂದೆಯೂ ಪುರುಷರ ಸಹಕಾರ ಇದ್ದೇ ಇರುತ್ತದೆ. ಆರೋಗ್ಯಕರ ಸಮಾಜದಲ್ಲಿ ಮಹಿಳೆ ಮತ್ತು ಪುರುಷರಿಬ್ಬರ ಪಾತ್ರವೂ ಅತಿ ಮುಖ್ಯ ಎಂದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಮಾತನಾಡಿ, ‘ಕೂಡು ಕುಟುಂಬದಲ್ಲಿರುವ ಸಂತೋಷ ಬೇರೆಲ್ಲೂ ಇಲ್ಲ. ಅತ್ತೆ, ಮಾವ, ನಾದಿನಿ ಇಲ್ಲದಿರುವ ಕುಟುಂಬಕ್ಕೆ ಹುಡುಗಿ ಕೊಡುತ್ತೇವೆ ಎಂಬುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಬಿ.ಆರ್.ಚಂದ್ರಮೌಳಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ ಇದ್ದರು.