ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಫಲಿತಾಂಶ ಕುಸಿತ: ಕೋವಿಡ್ ಸಬೂಬು...

ಹುಣಸೂರು–ಪಿರಿಯಾಪಟ್ಟಣಕ್ಕೆ ಎ ಗ್ರೇಡ್; ತಿ.ನರಸೀಪುರ–ಮೈಸೂರು ಉತ್ತರ ಶೈಕ್ಷಣಿಕ ವಲಯಕ್ಕೆ ಸಿ ಗ್ರೇಡ್
Last Updated 10 ಆಗಸ್ಟ್ 2020, 16:30 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಶೈಕ್ಷಣಿಕ ನಕ್ಷೆಯಲ್ಲಿ ಉತ್ತುಂಗದ ಸ್ಥಾನದಲ್ಲಿ ರಾರಾಜಿಸುತ್ತಿದ್ದ ಮೈಸೂರಿನ ಸ್ಥಾನಮಾನ ಈಚೆಗಿನ ವರ್ಷಗಳಲ್ಲಿ ಹಂತ ಹಂತವಾಗಿ ಕುಸಿತಗೊಳ್ಳುತ್ತಿದೆ. ಇದು ಶೈಕ್ಷಣಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.

ಐದು ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಅವಲೋಕಿಸಿದರೆ ಇದು ಸ್ಪಷ್ಟವಾಗಿ ಗೋಚರಿಸಲಿದೆ. 2015–16ನೇ ಸಾಲಿನಲ್ಲಿ 8ನೇ ಸ್ಥಾನದಲ್ಲಿದ್ದ ಜಿಲ್ಲೆ, 16–17ರಲ್ಲಿ 21 ಸ್ಥಾನಕ್ಕೆ ಕುಸಿದಿತ್ತು. 17–18ರಲ್ಲಿ 11ನೇ ಸ್ಥಾನಕ್ಕೆ ಚೇತರಿಸಿಕೊಂಡರೂ, 18–19ರಲ್ಲಿ 17ನೇ ಸ್ಥಾನಕ್ಕೆ ಕುಸಿತವಾಗಿತ್ತು. ಇದೀಗ ಮತ್ತೆ 19–20ನೇ ಸಾಲಿನಲ್ಲಿ 21ನೇ ಸ್ಥಾನ ಗಳಿಸಿದ್ದು, ತೀವ್ರ ಹಿನ್ನಡೆಯಾಗಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗಾಗಿ ಹಲವು ಕಾರ್ಯಕ್ರಮ ರೂಪಿಸಿತ್ತು. ರಾಜ್ಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹತ್ತರೊಳಗಿನ ಸ್ಥಾನ ಪಡೆಯುವ ಗುರಿ ನಿಗದಿಪಡಿಸಿಕೊಂಡಿತ್ತು. ಆದರೆ ಗುರಿ ಸಾಧನೆಯಾಗಿಲ್ಲ. ಎ ಗ್ರೇಡ್‌ ಫಲಿತಾಂಶವೂ ದೊರಕಿಲ್ಲ. ಬಿ ಗ್ರೇಡ್‌ಗೆ ತೃಪ್ತಿ ಪಟ್ಟುಕೊಂಡಿದೆ.

ಫಲಿತಾಂಶದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು, ಬಹುತೇಕರು ಕೋವಿಡ್‌ನಿಂದ ಅಪಾರ ಹಿನ್ನಡೆಯಾಗಿದೆ ಎಂದಿದ್ದಾರೆ.

ಗ್ರೇಡ್‌ ಪ್ರಕಟ: ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸೋಮವಾರ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಮೈಸೂರು ಜಿಲ್ಲೆಗೆ ಬಿ ಗ್ರೇಡ್‌ (21 ನೇ ಸ್ಥಾನ) ಲಭಿಸಿದೆ.

‘ಜಿಲ್ಲೆಯ 9 ಶೈಕ್ಷಣಿಕ ವಲಯಗಳಲ್ಲಿ ತಲಾ ಎರಡು ವಲಯಗಳು ಎ ಮತ್ತು ಸಿ ಗ್ರೇಡ್‌ನಲ್ಲೂ, ಉಳಿದವು ಬಿ ಗ್ರೇಡ್‌ನಲ್ಲೂ ಸ್ಥಾನ ಪಡೆದಿವೆ. ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳು ಎ ಗ್ರೇಡ್‌ ಗಳಿಸಿದ್ದರೆ, ಮೈಸೂರು ದಕ್ಷಿಣ, ಮೈಸೂರು ತಾಲ್ಲೂಕು, ನಂಜನಗೂಡು, ಎಚ್‌.ಡಿ.ಕೋಟೆ, ಕೆ.ಆರ್.ನಗರ ತಾಲ್ಲೂಕು ಬಿ ಗ್ರೇಡ್ ಪಡೆದಿವೆ. ತಿ.ನರಸೀಪುರ, ಮೈಸೂರು ಉತ್ತರ ಶೈಕ್ಷಣಿಕ ವಲಯ ಸಿ ಗ್ರೇಡ್‌ನಲ್ಲಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಉಪ ನಿರ್ದೇಶಕ ಡಾ.ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೇ 75ಕ್ಕಿಂತ ಹೆಚ್ಚು ಫಲಿತಾಂಶ ಪಡೆದ ಶೈಕ್ಷಣಿಕ ಜಿಲ್ಲೆ, ತಾಲ್ಲೂಕು, ವಲಯ ಎ ಗ್ರೇಡ್‌ನಲ್ಲಿ ಬಂದರೆ, ಶೇ 60ರಿಂದ ಶೇ 75 ಫಲಿತಾಂಶ ಪಡೆದವು ಬಿ ಗ್ರೇಡ್‌ನಲ್ಲೂ, 60ಕ್ಕಿಂತ ಕಡಿಮೆ ಫಲಿತಾಂಶ ಪಡೆದವು ಸಿ ಗ್ರೇಡ್‌ನಲ್ಲಿ ಬರಲಿವೆ’ ಎಂದು ಮೈಸೂರು ಉತ್ತರ ಶೈಕ್ಷಣಿಕ ವಲಯದ ಬಿಇಒ ಡಿ.ಉದಯಕುಮಾರ್ ಮಾಹಿತಿ ನೀಡಿದರು.

ಶಿಕ್ಷಕರ ಕೊರತೆ: ಫಲಿತಾಂಶಕ್ಕೆ ಹೊಡೆತ

‘ಮೈಸೂರು ಉತ್ತರ ಶೈಕ್ಷಣಿಕ ವಲಯ ಹಾಗೂ ತಿ.ನರಸೀಪುರ ತಾಲ್ಲೂಕಿನಲ್ಲಿ ಫಲಿತಾಂಶ ಕುಸಿತಗೊಂಡಿದೆ. ಮೈಸೂರು ಉತ್ತರದಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿದ್ದಾರೆ. ಅದರಲ್ಲೂ ಮುಸ್ಲಿಮರ ಸಂಖ್ಯೆ ಸಾಕಷ್ಟಿದ್ದು, ವಿದ್ಯಾರ್ಥಿಗಳಿಗೆ ಭಾಷಾ ಸಮಸ್ಯೆಯೂ ತೊಡಕಾಗಿದ್ದರಿಂದ ಫಲಿತಾಂಶ ಇಳಿಮುಖಗೊಂಡಿದೆ’ ಎಂದು ಡಿಡಿಪಿಐ ಡಾ.ಪಾಂಡುರಂಗ ವಿಶ್ಲೇಷಿಸಿದರು.

‘ತಿ.ನರಸೀಪುರ ತಾಲ್ಲೂಕಿನ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಆಡಳಿತ ಮಂಡಳಿ ಪರ್ಯಾಯ ವ್ಯವಸ್ಥೆಗೆ ಮುಂದಾಗದಿರುವುದು ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ’ ಎಂದು ಅವರು ಹೇಳಿದರು.

‘ಹಾಸ್ಟೆಲ್‌ಗಳಲ್ಲಿ ಉಳಿದಿದ್ದ ಬಹುತೇಕ ವಿದ್ಯಾರ್ಥಿಗಳು ಕೋವಿಡ್‌ ಕಾರಣದಿಂದ ತಮ್ಮೂರುಗಳಿಗೆ ಮರಳಿದರು. ಪರೀಕ್ಷೆ ಬಗ್ಗೆ ಹೆಚ್ಚಿನ ಗಮನ ಕೊಟ್ಟಿಲ್ಲ. ಇವರನ್ನು ಯಾರೊಬ್ಬರೂ ಮಾನಿಟರ್ ಮಾಡದಿರುವುದು ಸಹ ಫಲಿತಾಂಶ ಕುಸಿತಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.

‘ಫಲಿತಾಂಶ ಕುಸಿತದಿಂದ ಬಹಳ ಬೇಸರವಾಗಿದೆ. ಉತ್ತರ ಕೊಡದ ಸ್ಥಿತಿಯಲ್ಲಿದ್ದೇವೆ. ಮಕ್ಕಳು ನಾಲ್ಕು ತಿಂಗಳು ಮನೆಯಲ್ಲಿದ್ದರು. ಜಿಲ್ಲೆಯಿಂದ ಹೊರ ಹೋದ ಮಕ್ಕಳಿಗೆ ಶೈಕ್ಷಣಿಕ ಅವಕಾಶವೇ ಸಿಗಲಿಲ್ಲ. ಕುಸಿತಕ್ಕೆ ಕಾರಣ ಏನು ? ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಜಿಲ್ಲೆಯಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಸಭೆಯನ್ನು ಶೀಘ್ರದಲ್ಲೇ ನಡೆಸಲಿದ್ದೇನೆ’ ಎಂದು ಪಾಂಡುರಂಗ ಹೇಳಿದರು.

ಮೈಸೂರು ಜಿಲ್ಲೆಯ ಟಾಪರ್‌ಗಳು

ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳು ತಲಾ 623 ಅಂಕ ಗಳಿಸಿದ್ದಾರೆ.

‘ಪ್ರಜಾವಾಣಿ ಕ್ವಿಜ್’ ಚಾಂಪಿಯನ್‌ಷಿಪ್‌ನ ಗ್ರ್ಯಾಂಡ್‌ ಫಿನಾಲೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಗೌರವ್‌ ಚಂದನ್, ಐಡಿಯಲ್ ಜಾವಾ ರೋಟರಿ ಶಾಲೆಯ ಎನ್‌.ಆರ್.ಪ್ರೇಕ್ಷಾ, ವಿಜಯ ವಿಠಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಿ.ಮನು ತಲಾ 623 ಅಂಕ ಗಳಿಸಿ ಮೈಸೂರು ಜಿಲ್ಲೆಯ ಮೊದಲಿಗರಾಗಿದ್ದಾರೆ.

ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಎಂ.ಎನ್.ವಿಹಾನ್, ಎಸ್‌.ವಿವೇಕ್‌ ತಲಾ 622 ಅಂಕ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ.

ತರಳಬಾಳು ಪ್ರೌಢಶಾಲೆಯ ಎಂ.ಅಶ್ವಿನಿ, ವಿಜಯ ವಿಠಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌.ಸಂಜೀವಹೊಳ್ಳ, ಮರಿಮಲ್ಲಪ್ಪ ವಿದ್ಯಾಸಂಸ್ಥೆಯ ಅನಘಾ ಆಚಾರ್ಯ ತಲಾ 621 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.

ನಂಜನಗೂಡು ತಾಲ್ಲೂಕು ದೇಬೂರು ಗ್ರಾಮದ ಸರ್ಕಾರಿ ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿ ಎಸ್‌.ಮಹಿಮಾ 616 ಅಂಕ ಗಳಿಸಿದ್ದರೆ, ಮೈಸೂರಿನ ಜಾಕಿ ಕ್ವಾಟ್ರಸ್‌ನಲ್ಲಿರುವ ಸರ್ಕಾರಿ ಆದರ್ಶ ಪ್ರೌಢಶಾಲೆಯ ವಿದ್ಯಾರ್ಥಿ ಚಂದನ್‌ರಾಜ್‌ 615 ಹಾಗೂ ಹುಣಸೂರಿನ ಬಾಲಕರ ಸರ್ಕಾರಿ ಪ್ರೌಢಶಾಲೆಯ ಕೆ.ಎಸ್.ಮಾನುಷಿ 613 ಅಂಕ ಗಳಿಸುವ ಮೂಲಕ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಮೊದಲ ಮೂರು ಟಾಪರ್‌ಗಳಾಗಿದ್ದಾರೆ.

ಐಎಎಸ್‌ ಅಧಿಕಾರಿಯ ಕನಸು ಬಿಚ್ಚಿಟ್ಟ ಟಾಪರ್‌ಗಳು

‘620ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆಯಿತ್ತು. ಬೆಳಿಗ್ಗೆ 5 ಗಂಟೆಗೆ ಟ್ಯೂಷನ್‌ಗೆ ಹೋಗುತ್ತಿದ್ದೆ. ಸಂಜೆ 7ರಿಂದ ರಾತ್ರಿ 10ರವರೆಗೂ ನಿರಂತರವಾಗಿ ಓದುತ್ತಿದ್ದೆ. ಕೋವಿಡ್‌ನಿಂದ ಪರೀಕ್ಷೆ ಮುಂದಕ್ಕೆ ಹೋಗಿದ್ದರಿಂದ ಹಲವು ಬಾರಿ ಪುನರ್‌ ಮನನ ಮಾಡಿಕೊಂಡಿದ್ದೆ’ ಎಂದು 623 ಅಂಕ ಗಳಿಸಿರುವ ನಗರದ ಐಡಿಯಲ್ ಜಾವಾ ರೋಟರಿ ಶಾಲೆಯ ಎನ್‌.ಆರ್.ಪ್ರೇಕ್ಷಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೋವಿಡ್ ಆತಂಕದಲ್ಲೇ ಮೌಲ್ಯಮಾಪನ ನಡೆದಿತ್ತು. ಮೌಲ್ಯಮಾಪಕರು ಅಂಜಿಕೊಂಡು ಸರಿಯಾಗಿ ಮೌಲ್ಯಮಾಪನ ಮಾಡುತ್ತಾರೋ ? ಇಲ್ಲವೋ ಎಂಬುದು ನನಗೆ ಕಾಡುತ್ತಿತ್ತು. ಇಂಗ್ಲಿಷ್, ವಿಜ್ಞಾನದಲ್ಲಿ ತಲಾ ಒಂದೊಂದು ಅಂಕ ಕಡಿಮೆ ಬಂದಿದೆಯಷ್ಟೇ. ಪಿಯು ನಲ್ಲಿ ಪಿಸಿಎಂಬಿ ಮಾಡುವೆ. ಐಎಎಸ್‌ ಅಧಿಕಾರಿಯಾಗುವ ಕನಸು ನನ್ನದಿದೆ’ ಎಂದು ಅವರು ಹೇಳಿದರು.

ಟ್ಯೂಷನ್‌ಗೆ ಹೋಗಿರಲಿಲ್ಲ: ಮನು

‘620ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆ ನನ್ನದಾಗಿತ್ತು. ಪಿಯು ನಲ್ಲಿ ಪಿಸಿಎಂಸಿ ಮಾಡುವೆ. ಎಂಜಿನಿಯರಿಂಗ್ ಓದಿ ಕೆಲಸ ಗಿಟ್ಟಿಸುವೆ. ನಂತರ ಐಎಎಸ್‌ ಅಧಿಕಾರಿಯಾಗಲಿಕ್ಕಾಗಿಯೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವೆ’ ಎಂದು 623 ಅಂಕ ಗಳಿಸಿರುವ ನಗರದ ವಿಜಯ ವಿಠಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ, ನಗರ ಪೊಲೀಸ್‌ನ ಸಿಸಿಬಿಯ ಹೆಡ್‌ಕಾನ್‌ಸ್ಟೆಬಲ್ ಸಿ.ಚಿಕ್ಕಣ್ಣ ಪುತ್ರ ಸಿ.ಮನು ತಿಳಿಸಿದರು.

‘ಗಣಿತ, ವಿಜ್ಞಾನದಲ್ಲಿ ಒಂದೊಂದು ಕಡಿಮೆ ಅಂಕ ಬಂದಿದೆ. ಸಮಯ ವ್ಯರ್ಥವಾಗಲಿದೆ ಎಂದು ಟ್ಯೂಷನ್‌ಗೆ ಹೋಗಲಿಲ್ಲ. ಪೋಷಕರು ಒತ್ತಡ ಹಾಕುತ್ತಿರಲಿಲ್ಲ. ಗೆಳೆಯರು ಟ್ಯೂಷನ್‌ನ ಕೀ ನೋಟ್ಸ್‌ ಕೊಡುತ್ತಿದ್ದರು. ಗುಂಪು ಚರ್ಚೆಯಲ್ಲಿ ಭಾಗಿಯಾಗುತ್ತಿದ್ದೆ. ನಿಗದಿತ ಸಮಯಕ್ಕೆ ಪರೀಕ್ಷೆ ನಡೆಯದಿದ್ದು ಬೇಸರವಾಯ್ತು. ಲಾಕ್‌ಡೌನ್‌ ರಜೆಯಲ್ಲಿ ಆಟವಾಡಿದೆ. ಪರೀಕ್ಷೆ ಇನ್ನೊಂದು ತಿಂಗಳಿದೆ ಎಂದಾಗ ಗಣಿತ, ವಿಜ್ಞಾನ, ಇಂಗ್ಲಿಷ್‌ ವಿಷಯಕ್ಕೆ ಹೆಚ್ಚು ಒತ್ತುಕೊಟ್ಟು ಓದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT