ಮೈಸೂರು: ನಗರದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಭಾಗಿಯಾದ ಮೈಸೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಶೋಭಾ ಸುನೀಲ್ ತಮ್ಮ ಬೆಂಬಲಿಗರೊಟ್ಟಿಗೆ ವಧು–ವರರಿಗೆ ಪೆಟ್ರೋಲ್ ತುಂಬಿದ ಬಾಟಲ್ನ್ನು ಉಡುಗೊರೆಯಾಗಿ ನೀಡಿ ಶುಭ ಕೋರಿದ್ದಾರೆ.
ಇಲ್ಲಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಜಿ.ಶ್ರೀನಾಥ್ ಬಾಬು ಅವರ ಸುಪುತ್ರಿ ನಿಕಿತಾ ಹಾಗೂ ನಿತೇಶ್ ಭಾಸ್ಕರ್ ವಿವಾಹ ನಡೆದಿದೆ.
ವಿವಾಹ ಆರತಕ್ಷತೆ ಸಮಾರಂಭಕ್ಕೆ ಭಾಗಿಯಾದ ಪಾಲಿಕೆ ಸದಸ್ಯೆ ಶೋಭಾ, ವಧು–ವರರಿಬ್ಬರಿಗೂ ತಮ್ಮ ಬೆಂಬಲಿಗರೊಂದಿಗೆ ಶುಭ ಕೋರಿ ದಿನೇ ದಿನೇ ಗಗನಮುಖಿಯಾಗುತ್ತಿರುವ ಪೆಟ್ರೋಲ್ ತುಂಬಿದ ಬಾಟಲಿಯನ್ನು ಉಡುಗೊರೆಯಾಗಿ ನೀಡಿ, ಮದುವೆಗೆ ಬಂದಿದ್ದವರ ಗಮನ ಸೆಳೆದರು.
ಮಾಜಿ ಸದಸ್ಯ ಸುನೀಲ್, ಶೋಭಾ ಬೆಂಬಲಿಗರಾದ ಎಸ್.ಎನ್.ರಾಜೇಶ್, ಹರೀಶ್ ನಾಯ್ಡು, ಮಹೇಶ್, ಯತೀಶ್ ಸಹ ಪೆಟ್ರೋಲ್ ತುಂಬಿದ ಬಾಟಲಿ ನೀಡಿ ಶುಭ ಹಾರೈಸಿದ್ದಾರೆ.
ಈ ದೃಶ್ಯಾವಳಿ ಇದೀಗ ಈ ಭಾಗದ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.