ಮೈಸೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಸೋಮವಾರ ‘ಕೋದಂಡರಾಮ ಮಂದಿರ’ ಭಕ್ತರ ಪ್ರವೇಶಕ್ಕೆ ಮುಕ್ತವಾಯಿತು.
ಕೋವಿಡ್ ಹೆಚ್ಚುತ್ತಿರುವ ಕಾರಣ ವೇದಿಕೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡದೇ ಕೇವಲ ಧಾರ್ಮಿಕ ವಿಧಿವಿಧಾನಗಳಿಗಷ್ಟೇ ಸೀಮಿತವಾಗಿ ಅತ್ಯಂತ ಸರಳವಾಗಿ ಉದ್ಘಾಟನಾ ಕಾರ್ಯ ನೆರವೇರಿಸಲಾಯಿತು. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಇದರಲ್ಲಿ ಭಾಗಿಯಾದರು.
ಗಣಪತಿ ಹೋಮ ಮತ್ತು ಮಹಾಚಂಡಿಕಾ ಯಾಗಗಳು ನಡೆದವು. ದೇಗುಲದ ಮೇಲಿನ ಕಳಸ ಹಾಗೂ ಗರ್ಭಗುಡಿಯಲ್ಲಿನ ಮೂರ್ತಿಗಳನ್ನು ಪುನರ್ ಸ್ಥಾಪಿಸಲಾಯಿತು. ದೇವಸ್ಥಾನದ ಒಳಾಂಗಣದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳನ್ನಿಟ್ಟಿರುವುದು ವಿಶೇಷ. ಇದಕ್ಕಾಗಿ ತಮಿಳುನಾಡಿನಿಂದ ಶಿಲ್ಪಿಗಳನ್ನು ಇಲ್ಲಿಗೆ ಕರೆಸಲಾಗಿತ್ತು.
ಸುಮಾರು ನೂರು ವರ್ಷದಷ್ಟು ಹಳೆಯದಾದ ಈ ಮಂದಿರವನ್ನು ಸಿದ್ದರಾಮಯ್ಯ ಅವರ ಕುಟುಂಬದವರು ಗ್ರಾಮಸ್ಥರೊಂದಿಗೆ ಸೇರಿ ಈಚೆಗೆ ಜೀರ್ಣೋದ್ಧಾರ ಮಾಡಿದ್ದರು. ಸಿದ್ದರಾಮಯ್ಯ ಅವರು ಬಂದರೆ ಜನರು ಹೆಚ್ಚು ಸೇರಬಹುದು ಎಂಬ ಕಾರಣಕ್ಕೆ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.