ಮೈಸೂರು: ಇಲ್ಲಿನ ಫೈಯರ್ಬ್ರಿಗೇಡ್ ವೃತ್ತಕ್ಕೆ ವಿಶ್ವೇಶತೀರ್ಥ ಸ್ವಾಮೀಜಿ ಅವರ ಹೆಸರಿಡಬೇಕು ಹಾಗೂ ಇವರ ಸ್ಮಾರಕವಾಗಿ ಬೆಂಗಳೂರಿನಲ್ಲಿ ವರ್ಷಪೂರ್ತಿ ತೆರೆದಿರುವಂತಹ ಗ್ರಂಥಾಲಯ ಸ್ಥಾಪಿಸಬೇಕು ಎಂದು ಲೇಖಕ ಎಸ್.ನಾಗರಾಜ ಒತ್ತಾಯಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಶ್ರೀ ರಾಘವೇಂದ್ರ ಪ್ರಕಾಶನದ ವತಿಯಿಂದ ಶುಕ್ರವಾರ ನಡೆದ ತಮ್ಮ ‘ಯುಗದ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ‘ಮೈಸೂರಿನಲ್ಲಿ ಪ್ರಮುಖ ರಸ್ತೆಯೊಂದಕ್ಕೆ ಶ್ರೀಗಳ ಹೆಸರಿಡಬೇಕು ಎಂದು ಈಗಾಗಲೇ ಮನವಿ ಮಾಡಲಾಗಿದೆ. ಅವರು ನಿಧನರಾಗಿ ವರ್ಷವಾಗುತ್ತಿರುವ ಹೊತ್ತಿನಲ್ಲಿ ಅವರ ನೆನಪು ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅವರು ವಿಶ್ವೇಶತೀರ್ಥ ಸ್ವಾಮೀಜಿ ಅವರ ಆದರ್ಶಗಳನ್ನು ಕುರಿತು ಮಾತನಾಡಿದರು. ಸಾಮಾಜಿಕ ಹೊಣೆಗಾರಿಕೆ ಅವರ ಪ್ರತಿ ಮಾತಿನಲ್ಲಿಯೂ ಇತ್ತು ಎಂದು ಶ್ಲಾಘಿಸಿದರು.
ಇದಕ್ಕೂ ಮುನ್ನ ಉದ್ಯಮಿ ಎಂ.ಕೆ.ಪುರಾಣಿಕ ‘ಯುಗದ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ’ ಪುಸ್ತಕ ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಚಿಂತಕ ಮಡ್ಡೀಕೆರೆ ಗೋಪಾಲ್ ಇದ್ದರು.