ಮೈಸೂರು: ಇಲ್ಲಿನ ಕೆಆರ್ಎಸ್ ರಸ್ತೆಯಿಂದ ಕುಂಬಾರಕೊಪ್ಪಲು ಮಾರ್ಗವಾಗಿ ಸೂರ್ಯ ಬೇಕರಿ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಇಲ್ಲಿನ ಆದಿಶಕ್ತಿ ತಾಯಿ ದೇಗುಲದ ಆವರಣದಲ್ಲಿ ಚಾಲನೆ ನೀಡಿದರು.
₹3.10 ಕೋಟಿ ಮೊತ್ತದ ಬೃಹತ್ ಯೋಜನೆ ಇದಾಗಿದ್ದು, ಈ ಭಾಗದ ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸದ್ಯ ಇರುವ ರಸ್ತೆಯನ್ನೇ ಡಾಂಬರೀಕರಣ ಮಾಡುವುದು, ಮಳೆ ನೀರು ಚರಂಡಿ ನಿರ್ಮಿಸುವುದು, ಬಸ್ ನಿಲ್ದಾಣವನ್ನು ಹೈಟೆಕ್ಗೊಳಿಸುವುದು, ರಸ್ತೆಯನ್ನು ಸಂಪರ್ಕಿಸುವ ಅಡ್ಡರಸ್ತೆಗಳನ್ನೂ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಎಲ್.ನಾಗೇಂದ್ರ ಸುದ್ದಿಗಾರರಿಗೆ ತಿಳಿಸಿದರು.
‘ಶಾಸಕರ ಅನುದಾನದಲ್ಲಿ ಯಾವುದೇ ಕೊರತೆ ಆಗಿಲ್ಲ. ಇದುವರೆಗೂ ₹100 ಕೋಟಿಯಷ್ಟು ಅನುದಾನ ಬಂದಿದೆ. ಮತ್ತೂ ₹150 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಪಾಲಿಕೆ ಸದಸ್ಯರಾದ ಉಷಾಕುಮಾರ್, ಕೆ.ವಿ.ಶ್ರೀಧರ್, ಸುಬ್ಬಯ್ಯ, ಮುಖಂಡರಾದ ಡಿ.ಮಾದೇಗೌಡ, ಬಿಜೆಪಿಯ ಚಾಮರಾಜ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಕುಮಾರಗೌಡ ಇದ್ದರು.