ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಛತ್ರ, ಸಮುದಾಯ ಭವನದ ಮಾಲೀಕರಿಗೆ ಖಡಕ್ ಎಚ್ಚರಿಕೆ

ಕೊರೊನಾ ಸೋಂಕು ತಡೆಯುವ ಆದೇಶ ಉಲ್ಲಂಘಿಸಿದರೆ ಪ್ರಕರಣ ದಾಖಲು
Last Updated 5 ನವೆಂಬರ್ 2020, 3:11 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸಿದ್ದಲ್ಲಿ ಛತ್ರ ಅಥವಾ ಸಭಾಂಗಣದ ಮಾಲೀಕರು, ವ್ಯವಸ್ಥಾಪಕರು, ಆಯೋಜಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎ.ಎನ್‌.ಪ್ರಕಾಶ್‌ಗೌಡ ಎಚ್ಚರಿಕೆ ನೀಡಿದರು.

ಕೊರೊನಾ ಸೋಂಕು ನಿಯಂತ್ರಿಸುವ ಕುರಿತು ಇವರು ಹಾಗೂ ಸಂಚಾರ ಹಾಗೂ ಅಪರಾಧ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಅವರು ನಗರದ ಛತ್ರ, ಸಮುದಾಯ ಭವನದ ಮಾಲೀಕರು, ವ್ಯವಸ್ಥಾಪಕರುಗಳೊಂದಿಗೆ ಬುಧವಾರ ಸಭೆ ನಡೆಸಿದರು.

ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸಭಾ ಭವನದ ಒಟ್ಟು ಸಾಮಥ್ಯದ ಕನಿಷ್ಠ ಶೇ 50 ಅಥವಾ ಗರಿಷ್ಠ 200 ಜನರಿಗೆ ಮಾತ್ರ ಅನುಮತಿ ನೀಡಬೇಕು, ಭಾಗವಹಿಸುವ ಎಲ್ಲರೂ ತಪ್ಪದೆ ಮುಖಗವಸು ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು ಮತ್ತು ಕೈ ತೊಳೆಯಲು ಸಾಬೂನು ಅಥವಾ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದು ಸೂಚನೆ ನೀಡಿದರು.

ಮದುವೆ ಅಥವಾ ಇತರೆ ಕಾರ್ಯಕ್ರಮ ನಡೆಯುವ ದಿನ ಮತ್ತು ಕಾರ್ಯಕ್ರಮ ಆಯೋಜಕರ ಸಂಪೂರ್ಣ ವಿವರವನ್ನು ಒಂದು ವಾರ ಮುಂಚಿತವಾಗಿ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು, ಛತ್ರ ಅಥವಾ ಸಭಾಂಗಣವನ್ನು ಮುಂಗಡವಾಗಿ ಕಾಯ್ದಿರಿಸುವ ವೇಳೆ, ಕಾರ್ಯಕ್ರಮ ನಡೆಸುವ ವೇಳೆ ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಬಾಣಸಿಗರು, ಊಟ ಬಡಿಸುವವರು, ಸ್ವಚ್ಚತಾ ಕಾರ್ಯ ನಿರ್ವಹಿಸುವವರು, ಛಾಯಾಚಿತ್ರ ಮತ್ತು ವಿಡಿಯೊಗ್ರಾಫರ್‌ಗಳು ತಪ್ಪದೇ ಮಾಸ್ಕ್, ಕೈಗವಸು ಧರಿಸಿರಬೇಕು, ಪ್ರವೇಶದ್ವಾರ, ಹೊರ ಹೋಗುವ ಕಡೆಗಳಲ್ಲಿ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಿರಬೇಕು ಎಂದು ತಿಳಿಸಿದರು.

ಛತ್ರ, ಸಮುದಾಯ ಭವನ ಅಥವಾ ಸಭಾಂಗಣದಲ್ಲಿ ಮತ್ತು ಊಟದ ಹಾಲ್‍ನಲ್ಲಿ ಸಾಮಾಜಿಕ ಅಂತರ ಕಾಯ್ದಿರಿಸಿ ಆಸನಗಳ ವ್ಯವಸ್ಥೆ ಮಾಡಬೇಕು, ಸರ್ಕಾರದ ಅಧಿಸೂಚನೆಗಳ ಪಾಲನೆ ಬಗ್ಗೆ ಆಯೋಜಕರಿಗೆ, ವ್ಯವಸ್ಥಾಪಕರಿಗೆ ಅರಿವು ಮೂಡಿಸಿ, ಸರ್ಕಾರದ ಆದೇಶಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT