ನಂಜನಗೂಡು (ಮೈಸೂರು): ತಾಲ್ಲೂಕಿನ ಅಳಗಂಚಿ ಗ್ರಾಮದ ಬಳಿಯಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು, ಆಯತಪ್ಪಿ ಕೆಳಗೆ ಬಿದ್ದು ಕಬ್ಬು ನುರಿಸುವ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಅಮೃತ್ (33) ಮೃತಪಟ್ಟ ವ್ಯಕ್ತಿ.
ಅಮೃತ್ ಕಬ್ಬು ನುರಿಸುವ ಯಂತ್ರದ ಮೇಲ್ಭಾಗದ ಚಾವಣಿಗೆ ವೆಲ್ಡಿಂಗ್ ಮಾಡುತ್ತಿದ್ದರು. ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕಬ್ಬಿನ ಜೊಲ್ಲೆ ಜೊತೆಗೆ ಕಬ್ಬು ನುರಿಸುವ ಯಂತ್ರಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಬಿಳಿಗೆರೆ ಪೊಲೀಸರು ಕಾರ್ಖಾನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ 8 ಗಂಟೆಯಾದರೂ ದೂರು ದಾಖಲಾಗಿಲ್ಲ ಎಂಬುದು ಗೊತ್ತಾಗಿದೆ.