ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಓಣಂಗೆ ಕ್ಷಣಗಣನೆ; ಇಲ್ಲಿ ಬೆಲೆ ಹೆಚ್ಚಳ

ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಧಾರಣೆ ಏರಿಕೆ
Last Updated 18 ಆಗಸ್ಟ್ 2020, 7:26 IST
ಅಕ್ಷರ ಗಾತ್ರ

ಮೈಸೂರು: ಕೇರಳ ರಾಜ್ಯದಲ್ಲಿ ಓಣಂ ಹಬ್ಬಕ್ಕೆ ಬಿರುಸಿನ ಸಿದ್ಧತೆಗಳು ನಡೆದಿರುವಂತೆಯೇ ಇತ್ತ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳ ಧಾರಣೆ ಹೆಚ್ಚಳಗೊಂಡಿದೆ.

ಬೆಂಡೆಕಾಯಿ ಬೆಲೆಯು ದುಪ್ಪಟ್ಟಾಗಿದ್ದರೆ, ಬೀನ್ಸ್, ಹಸಿರುಮೆಣಸಿನಕಾಯಿ, ಸಿಹಿಗುಂಬಳದ ಬೆಲೆಗಳು ಹೆಚ್ಚಾಗಿವೆ. ರೈತರಲ್ಲಿ ಹರ್ಷ ಮೂಡಿಸಿದೆ.

ಬೆಂಡೆಕಾಯಿ ಬೆಲೆಯು ಸಗಟು ಕೆ.ಜಿಗೆ ₹ 12 ಇದ್ದದ್ದು ಸೋಮವಾರ ₹ 23ಕ್ಕೆ ಏರಿಕೆ ಕಂಡಿದೆ. ಬೀನ್ಸ್ ಬೆಲೆಯು ಕೆ.ಜಿಗೆ ₹ 30 ಇದ್ದದ್ದು ₹ 45ಕ್ಕೆ ಹೆಚ್ಚಳಗೊಂಡಿದೆ. ಸಿಹಿಗುಂಬಳದ ಬೆಲೆಯು ₹ 8ರಿಂದ ₹ 10ಕ್ಕೆ, ಹೀರೆಕಾಯಿ ₹ 22ರಿಂದ ₹ 25ಕ್ಕೆ ಏರಿಕೆಯಾಗಿದೆ.

ಹಸಿರು ಮೆಣಸಿನಕಾಯಿ ಆವಕ ಕಳೆದ ವಾರ ದಿನವೊಂದಕ್ಕೆ 43 ಕ್ವಿಂಟಲ್‌ನಷ್ಟಿತ್ತು. ಈಗ 65 ಕ್ವಿಂಟಲ್‌ಗೆ ಏರಿಕೆಯಾಗಿದೆ. ಹೀಗಿದ್ದರೂ, ಬೆಲೆಯು ₹ 22ರಿಂದ 30ಕ್ಕೆ ಹೆಚ್ಚಾಗಿರುವುದು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.

‘ಕೇರಳ ವರ್ತಕರಿಂದ ಈ ಬಗೆಯ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೂ ಒಂದು ವಾರಗಳ ಇದೇ ಪರಿಸ್ಥಿತಿ ಮುಂದುವರಿಯುವ ನಿರೀಕ್ಷೆ ಇದೆ’ ಎಂದು ವರ್ತಕ ರಾಮು ತಿಳಿಸಿದರು.

ಟೊಮೆಟೊ ಬೆಲೆ ಈ ವಾರ ತೂಗುಯ್ಯಾಲೆಯಾಡುತ್ತಿದೆ. ಕಳೆದ ವಾರ ಕೆ.ಜಿಗೆ ₹ 17 ಇದ್ದ ಧಾರಣೆ ಬುಧವಾರ ₹ 22ಕ್ಕೆ ಹೆಚ್ಚಾಯಿತು. ನಂತರ, ಭಾನುವಾರ 16ಕ್ಕೆ ಇಳಿಯಿತು. ಮತ್ತೆ ಸೋಮವಾರ ₹ 17 ಆಗಿದೆ.

ಕ್ಯಾರೆಟ್ ₹ 45ರಿಂದ 40ಕ್ಕೆ, ನುಗ್ಗೆಕಾಯಿ ₹ 40ರಿಂದ 35ಕ್ಕೆ ಇಳಿಕೆಯಾಗಿದೆ. ಎಲೆಕೋಸು ₹ 8 ಹಾಗೂ ದಪ್ಪಮೆಣಸಿನಕಾಯಿ ₹ 40ರಲ್ಲೇ ಸ್ಥಿರವಾಗಿದೆ.

ಕೋಳಿಮೊಟ್ಟೆ ಅಲ್ಪಚೇತರಿಕೆ: ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ಮೊಟ್ಟೆ ಉತ್ಪಾದಕರು ಈ ವಾರ ಕೊಂಚ ನಿರಾಳರಾಗಿದ್ದಾರೆ. ಒಂದೇ ವಾರಕ್ಕೆ 20 ಪೈಸೆಯಷ್ಟು ಹೆಚ್ಚಳವಾಗಿರುವುದು, ಶ್ರಾವಣ ಮಾಸ ಮುಗಿಯುತ್ತ ಬಂದಿರುವುದು ಹೊಸ ನಿರೀಕ್ಷೆಗಳನ್ನು ಗರಿಗೆದರಿಸಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ಕಳೆದ ವಾರ ₹ 3.50 ಇದ್ದದ್ದು, ಈಗ ₹ 3.70ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT