ಮೈಸೂರು: ‘ಮೈಸೂರು ಮಹಾರಾಜರಿಗೆ ಮೋಸ ಮಾಡಿದ ಟಿಪ್ಪು ಜಯಂತಿಯನ್ನು ಸಾರ್ವಜನಿಕರ ಹಣದಲ್ಲಿ ಮಾಡಿದ್ದು, ಸಿದ್ದರಾಮಯ್ಯ ಅವರ ದೊಡ್ಡ ಸಾಧನೆ’ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೊಂಕು ಮಾತನಾಡಿದ್ದಾರೆ.
ಬಿಜೆಪಿಯ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕವು ಇಲ್ಲಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಶಾದಿಭಾಗ್ಯ ನೀಡಿದ ಸಿದ್ದರಾಮಯ್ಯ ಅವರ ಕೊಡುಗೆ ಮೈಸೂರಿಗೆ ಏನು?’ ಎಂದು ಪ್ರಶ್ನಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ,‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗುವುದು ಇರಲಿ,ವಿಧಾನ ಪರಿಷತ್ ಚುನಾವಣೆಯಲ್ಲೂ ಗೆಲ್ಲುವುದಿಲ್ಲ’ ಎಂದರು.
‘ನೆನ್ನೆಯಷ್ಟೇ ಅವರು ತನ್ನನ್ನು ಸೋಲಿಸಿದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡರು. ನನ್ನನ್ನು ಸೋಲಿಸಿದ ನಿಮಗೆ ನಾಚಿಕೆ ಆಗಲ್ವಾ ಎಂದರು. ಆದರೆ, ಡಾ.ಜಿ.ಪರಮೇಶ್ವರ ಅವರನ್ನು ಸೋಲಿಸಿದ ಸಿದ್ದರಾಮಯ್ಯ ಅವರಿಗೆ ನಾಚಿಕೆ ಇದೆಯೆ?’ ಎಂದು ವ್ಯಂಗ್ಯವಾಡಿದರು.
‘ಡಿ.ಕೆ.ಶಿವಕುಮಾರ್ ಎಂದು ಕೂಗಿದರೆ ಸಾಕು ಅವರನ್ನು ಕಾಂಗ್ರೆಸ್ ದ್ರೋಹಿಗಳು ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಇದು ಕಾಂಗ್ರೆಸ್ ಸ್ಥಿತಿ.ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ 5 ಸಾವಿರ, ಉಪಾಧ್ಯಕ್ಷರಿಗೆ 4 ಸಾವಿರ, ಸದಸ್ಯರಿಗೆ 2 ಸಾವಿರ ಗೌರವಧನ ನೀಡುತ್ತೇವೆ’ಎಂದು ಭರವಸೆ ನೀಡಿದರು.