ಮೈಸೂರು: ಜಿಲ್ಲೆಯಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಅಪಘಾತದಲ್ಲಿ ಮೂವರು ಮಹಿಳೆಯರೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಮೈಸೂರು- ಮಾನಂದವಾಡಿ ಮುಖ್ಯರಸ್ತೆಯ ಜಯಪುರ ಸಮೀಪ ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿಗಳಾದ ಮಹೇಶ್ (27) ಹಾಗೂ ಅನುಷಾ (25) ಸ್ಥಳದಲ್ಲೇ ಮೃತಪಟ್ಟವರು. ಅನೂಪ್ (25) ಗಾಯಗೊಂಡವರು.
ಇವರು ಮೂವರೂ ಪರಸ್ಪರ ಸ್ನೇಹಿತರಾಗಿದ್ದು, ಎಚ್.ಡಿ.ಕೋಟೆ ಕಡೆಗೆ ಬಂದಿದ್ದರು. ವಾಪಸ್ ಮೈಸೂರು ಕಡೆಗೆ ತೆರಳುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತ ನಡೆದ ಸ್ಥಳಕ್ಕೆ ಡಿವೈಎಸ್ಪಿ ಡಾ.ಸುಮೀತ್, ಜಯಪುರ ಪಿಎಸ್ಐ ಕೆ.ಸಿ.ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುಚಿ ಬಿದ್ದ ಆಟೊ; ಮಹಿಳೆ ಸಾವು ಜಯಪುರ: ಇಲ್ಲಿಗೆ ಸಮೀಪದ ದಾರಿಪುರ ಗ್ರಾಮದ ಬಳಿ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸರಕು ಸಾಗಣೆ ಆಟೊವೊಂದು ಮಗುಚಿ ಬಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉದ್ಬೂರು ನಿವಾಸಿ ಚಂದ್ರಮ್ಮ (60) ಮೃತಪಟ್ಟವರು. ಇವರು ಇತರೆ 20 ಮಹಿಳೆಯರೊಂದಿಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ವಾಪಸ್ ಊರಿಗೆ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಆಟೊ ಮಗುಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಹರಿದು ಮಹಿಳೆ ಸಾವು ಮೈಸೂರು: ಇಲ್ಲಿನ ಪಡುವಾರಹಳ್ಳಿ ಜಂಕ್ಷನ್ ಸಮೀಪ ಹುಣಸೂರು ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ವೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದರಿಂದ ಶ್ವೇತಾ ಎಂಬುವವರು ಮೃತಪಟ್ಟಿದ್ದಾರೆ.
ಬಸ್ನ ಚಕ್ರವು ಇವರ ಮೇಲೆ ಹರಿದು ತೀವ್ರ ರಕ್ತಸ್ರಾವ ಉಂಟಾಯಿತು. ಇವರು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿ.ವಿ ಪುರಂ ಠಾಣೆಯಲ್ಲಿ ದಾಖಲಾಗಿದೆ.
ಆತ್ಮಹತ್ಯೆ ಮೈಸೂರು: ಇಲ್ಲಿನ ರಾಜರಾಜೇಶ್ವರಿ ನಗರದ ನಿವಾಸಿ ಮದನ್ (24) ಎಂಬಾತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಟ್ಟೆನೋವಿನಿಂದ ಬೇಸರಗೊಂಡು ಈತ ಮನೆಯಲ್ಲಿ ಯಾರೂ ಇಲ್ಲದಾಗ ಆತ್ಮಹತ್ಯೆ ಮಾಡಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.