ಕೆ.ಆರ್.ನಗರ (ಮೈಸೂರು ಜಿಲ್ಲೆ): ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇವತ್ತಿನ ರಾಜಕಾರಣ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಚಕ್ರದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಹೇಳಿದರು.
‘ಮತ್ತೆ ಕಾಂಗ್ರೆಸ್ ಸೇರುವಿರಾ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಯಾವ ಪಕ್ಷಗಳೂ ಮುಳುಗುವ ಹಡಗುಗಳಲ್ಲ. ಅವು ಜನರೊಂದಿಗೆ ತೇಲುವಂಥವು; ಇರುವಂಥವು’ ಎಂದರು.
‘ಭಾರತ್ ಜೋಡೊ ಯಾತ್ರೆಯಿಂದಾಗಿ ಕಾಂಗ್ರೆಸ್ಗೆ ಸಾಕಷ್ಟು ಶಕ್ತಿ ಬರುತ್ತಿದೆ. ಆ ಪಕ್ಷದ ನಾಯಕ ರಾಹುಲ್ ಗಾಂಧಿ ಬಗ್ಗೆ ಜನರಲ್ಲಿ ಬಹಳಷ್ಟು ಕೆಟ್ಟ ಅಭಿಪ್ರಾಯಗಳನ್ನು ವಿರೋಧಿಗಳು ಮೂಡಿಸಿದ್ದರು. ಈ ಪಾದಯಾತ್ರೆಯ ಮೂಲಕ ದೇಶದಲ್ಲಿ ಪರ್ಯಾಯ ನಾಯಕ ಇದ್ದಾನೆ ಎನ್ನವುದನ್ನು ರಾಹುಲ್ ತೋರಿಸಿಕೊಟ್ಟಿದ್ದಾರೆ’ ಎಂದು ಹೊಗಳಿದರು.
‘10 ಲಕ್ಷ ಉದ್ಯೋಗದ ಭರವಸೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಆಧಾರದ ಮೇಲೆ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ದುರ್ಬಲ ವರ್ಗದವರು ಉದ್ಯೋಗದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.