ಮೈಸೂರು: ‘ಜಿಲ್ಲೆಯಲ್ಲಿ ಜೇನು ಕುರುಬ ವಿಶೇಷ ಕರ್ತವ್ಯಾಧಿಕಾರಿಗಳ ಕಚೇರಿ ಪುನರಾರಂಭಿಸಿ, ಸಮುದಾಯಕ್ಕೆ ಸೂಕ್ತ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಜೇನು ಕುರುಬ ಅಭಿವೃದ್ಧಿ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜೆ.ಟಿ.ರಾಜಪ್ಪ, ‘2006ರಲ್ಲಿ ಹುಣಸೂರು ತಾಲ್ಲೂಕಿನಲ್ಲಿ ಇದ್ದ ಜೇನು ಕುರುಬರ ಕಚೇರಿಯನ್ನು ಸ್ಥಗಿತಗೊಳಿಸಲಾಗಿದೆ. ಸಮುದಾಯಕ್ಕೆ ನೀಡುವ ಪೌಷ್ಟಿಕ ಆಹಾರವೂ ಕಳೆದ ಮೂರು ತಿಂಗಳಿಂದ ವಿತರಿಸಿಲ್ಲ’ ಎಂದು ಆರೋಪಿಸಿದರು.
‘ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಪರಿಶಿಷ್ಟ ವರ್ಗಗಳ ಸಮಗ್ರ ಯೋಜನೆ ವಿಭಾಗವು ಸಮುದಾಯದ ಮುಖಂಡರ ಸಮಸ್ಯೆ ಆಲಿಸಲು ಪ್ರಯತ್ನಿಸಿಲ್ಲ. ಯೋಜನೆ ಅಧಿಕಾರಿ ಮುನಿರಾಜು ಅವರು ಸಮುದಾಯದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತೋರುತ್ತಿದ್ದು, ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಹೀಗೆಯೇ ಮುಂದುವರಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಸವಣ್ಣ, ಕಾರ್ಯದರ್ಶಿ ಜೆ.ಟಿ.ಚಂದ್ರು, ಸದಸ್ಯರಾದ ಜಯಪ್ಪ, ರವಿ, ಸಿದ್ದು, ಮಾಸ್ತಿ, ತಿಮ್ಮಯ್ಯ, ಲಿಂಗಪ್ಪ ಉಪಸ್ಥಿತರಿದ್ದರು.