ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಮಾಂಸ ಸೇವಿಸಿ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದು ಸರಿಯಲ್ಲ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಆ ವಿಷಯದಲ್ಲಿ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಅದು ಅವರವರಿಗೆ ಸಂಬಂಧಿಸಿದ್ದು’ ಎಂದರು.
ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ‘ಸಿದ್ದರಾಮಯ್ಯ ಅವರು ಈ ರೀತಿ ಆಗಾಗ ನಡೆದುಕೊಳ್ಳುತ್ತಾರೆ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಹೋಗಿದ್ದಾಗಲೂ ಅಪಚಾರ ಮಾಡಿದ್ದರು. ಆಗ ಮಾಂಸ ತಿಂದು ದೇವರ ದರ್ಶನ ಮಾಡಬಾರದು ಎಂದು ಕೇಳಿದ್ದರು’ ಎಂದು ಟೀಕಿಸಿದರು.
‘ಸುತ್ತೂರು ಶ್ರೀಕ್ಷೇತ್ರದ ಗದ್ದುಗೆ ಬಹಳ ಪವಿತ್ರ ಸ್ಥಳ. ಅಲ್ಲಿಗೆ ಮಾಂಸ ಸೇವಿಸಿ ಹೋಗಿದ್ದು ದೊಡ್ಡ ಅಪಚಾರ. ಮಾಂಸ ತಿಂದು ಗದ್ದುಗೆ ಪೂಜೆ ಮಾಡಿರುವುದು ಖಂಡನೀಯ. ಯಾವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ ಎಂಬ ಅರಿವು ಮುಖ್ಯಮಂತ್ರಿಗೆ ಇರಬೇಕಾಗುತ್ತದೆ. ಆದರೆ, ಸಿದ್ದರಾಮಯ್ಯ ಅವರು ಉಡಾಫೆಯಿಂದ ಮಾತನಾಡುತ್ತಾರೆ’ ಎಂದರು.