ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟಕ್ಕೆ ಅವಕಾಶ ನೀಡದಿರಿ: ಅಬಕಾರಿ ಜಿಲ್ಲಾಧಿಕಾರಿಗೆ ಮನವಿ

Published 28 ಮಾರ್ಚ್ 2024, 15:53 IST
Last Updated 28 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು’ ಎಂದು ತಾಲ್ಲೂಕಿನ ಗಡಿಭಾಗದ ಬಾವಲಿ ಹಾಡಿಯ ನಿವಾಸಿಗಳು ಅಬಕಾರಿ ಜಿಲ್ಲಾಧಿಕಾರಿ ಮಹಾದೇವಿ ಬಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಗುರುವಾರ ಗಡಿಭಾಗದ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆಯು ತೆರೆದಿರುವ ಚೆಕ್‌ಪೋಸ್ಟ್‌ಗೆ ಅಬಕಾರಿ ಎಸ್‌ಪಿ ಭೇಟಿ ನೀಡಿದಾಗ ಹಾಡಿಯ ನಿವಾಸಿಗಳು ಆಗಮಿಸಿ ಅಹವಾಲು ಮಂಡಿಸಿದರು.

ಹಾಡಿಯ ನಿವಾಸಿ ಸುಬ್ರಹ್ಮಣ್ಯ ಮಾತನಾಡಿ, ‘ಅಬಕಾರಿ ಆಯುಕ್ತರಾದ ಮಂಜುನಾಥ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹಾಡಿಯಿಂದ 100 ಮೀಟರ್ ದೂರದಲ್ಲಿರುವ ರೆಸಾರ್ಟ್‌ನಲ್ಲಿ ಮದ್ಯದ ಅಂಗಡಿ ತೆರೆದು ಹೊರಗಡೆಯಿಂದ ಬರುವವರಿಗೆ ಮದ್ಯ ಮಾರಟ ಮಾಡಿಸುತ್ತಿದ್ದಾರೆ’ ಎಂದರು.

‘ಕೇರಳದಿಂದಲೂ ಬಂದು ಪಾನಮತ್ತರಾಗಿ ತೆರಳುವವರು ಅನೇಕ ಬಾರಿ ಹಲ್ಲೆ ನಡೆಸಿದ ನಿದರ್ಶನಗಳಿವೆ. ಅರಣ್ಯ ಇಲಾಖೆ ರೆಸಾರ್ಟ್‌ನಲ್ಲಿ ಉಳಿದುಕೊಳ್ಳುವವರಿಗೆ ಮದ್ಯ ಸರಬರಾಜು ಮಾಡಲು ಅವಕಾಶ ನೀಡಿರುವುದನ್ನೇ ಮುಂದಿಟ್ಟುಕೊಂಡು ಮಂಜುನಾಥ್ ಅವರು ರೆಸಾರ್ಟ್ ಕಾಂಪೌಂಡ್ ಗೋಡೆ ಪಕ್ಕದಲ್ಲಿ ಹೊಸದಾಗಿ ಮಳಿಗೆ ನಿರ್ಮಾಣ ಮಾಡಿ, ಗೇಟ್ ಅಳವಡಿಸಿ ಸಾರ್ವಜನಿಕರಿಗೆ ಮದ್ಯ ಮಾರಟ ಮಾಡುತ್ತಿದ್ದಾರೆ’ ಎಂದು ದೂರಿದರು.

ಮಹಾದೇವಿ ಬಾಯಿ ಪ್ರತಿಕ್ರಿಯಿಸಿ, ‘ಈ ಬಗ್ಗೆ ಮಾಹಿತಿ ದೊರೆತಿದ್ದು, ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

ಅಬಕಾರಿ ಡಿವೈಎಸ್ಪಿ ವಿಕ್ರಮ್, ಅಬಕಾರಿ ನಿರೀಕ್ಷಕಿ ದಿವ್ಯ ಶ್ರೀ, ಹಾಡಿಯ ನಿವಾಸಿಗಳಾದ ಜಯಮ್ಮ, ಭಾಗ್ಯ, ಸಿ.ಕೆ.ರಾಜು, ಮಹೇಶ್, ರಾಜೇಶ, ಸಣ್ಣಪ್ಪ, ಸುಬ್ಬು, ಚಂದ್ರು, ಚಿನ್ನಪ್ಪ, ಜಯಮ್ಮ ಸರೋಜಿನಿ, ನಾಗೇಶ್, ಅಮ್ಮಣ್ಣಿ, ಸುಂದ್ರಿ, ರುಕ್ಮಿಣಿ, ದೀಪು, ಜಾನು, ಮಾರೇ, ಕಾಳಿ, ಬಿಂದು ಲೀಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT