ಎಚ್.ಡಿ.ಕೋಟೆ: ‘ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು’ ಎಂದು ತಾಲ್ಲೂಕಿನ ಗಡಿಭಾಗದ ಬಾವಲಿ ಹಾಡಿಯ ನಿವಾಸಿಗಳು ಅಬಕಾರಿ ಜಿಲ್ಲಾಧಿಕಾರಿ ಮಹಾದೇವಿ ಬಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಗುರುವಾರ ಗಡಿಭಾಗದ ಬಾವಲಿ ಚೆಕ್ಪೋಸ್ಟ್ನಲ್ಲಿ ಅಬಕಾರಿ ಇಲಾಖೆಯು ತೆರೆದಿರುವ ಚೆಕ್ಪೋಸ್ಟ್ಗೆ ಅಬಕಾರಿ ಎಸ್ಪಿ ಭೇಟಿ ನೀಡಿದಾಗ ಹಾಡಿಯ ನಿವಾಸಿಗಳು ಆಗಮಿಸಿ ಅಹವಾಲು ಮಂಡಿಸಿದರು.
ಹಾಡಿಯ ನಿವಾಸಿ ಸುಬ್ರಹ್ಮಣ್ಯ ಮಾತನಾಡಿ, ‘ಅಬಕಾರಿ ಆಯುಕ್ತರಾದ ಮಂಜುನಾಥ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹಾಡಿಯಿಂದ 100 ಮೀಟರ್ ದೂರದಲ್ಲಿರುವ ರೆಸಾರ್ಟ್ನಲ್ಲಿ ಮದ್ಯದ ಅಂಗಡಿ ತೆರೆದು ಹೊರಗಡೆಯಿಂದ ಬರುವವರಿಗೆ ಮದ್ಯ ಮಾರಟ ಮಾಡಿಸುತ್ತಿದ್ದಾರೆ’ ಎಂದರು.
‘ಕೇರಳದಿಂದಲೂ ಬಂದು ಪಾನಮತ್ತರಾಗಿ ತೆರಳುವವರು ಅನೇಕ ಬಾರಿ ಹಲ್ಲೆ ನಡೆಸಿದ ನಿದರ್ಶನಗಳಿವೆ. ಅರಣ್ಯ ಇಲಾಖೆ ರೆಸಾರ್ಟ್ನಲ್ಲಿ ಉಳಿದುಕೊಳ್ಳುವವರಿಗೆ ಮದ್ಯ ಸರಬರಾಜು ಮಾಡಲು ಅವಕಾಶ ನೀಡಿರುವುದನ್ನೇ ಮುಂದಿಟ್ಟುಕೊಂಡು ಮಂಜುನಾಥ್ ಅವರು ರೆಸಾರ್ಟ್ ಕಾಂಪೌಂಡ್ ಗೋಡೆ ಪಕ್ಕದಲ್ಲಿ ಹೊಸದಾಗಿ ಮಳಿಗೆ ನಿರ್ಮಾಣ ಮಾಡಿ, ಗೇಟ್ ಅಳವಡಿಸಿ ಸಾರ್ವಜನಿಕರಿಗೆ ಮದ್ಯ ಮಾರಟ ಮಾಡುತ್ತಿದ್ದಾರೆ’ ಎಂದು ದೂರಿದರು.
ಮಹಾದೇವಿ ಬಾಯಿ ಪ್ರತಿಕ್ರಿಯಿಸಿ, ‘ಈ ಬಗ್ಗೆ ಮಾಹಿತಿ ದೊರೆತಿದ್ದು, ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.