ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೋಮವಾರ ಈದ್ ಉಲ್ ಫಿತ್ರ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿಲ್ಲ. ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆ ಇಲ್ಲ. ಹೀಗಾಗಿ, ಅಶೋಕರಸ್ತೆಯ ಮಸೀದಿ ಸೇರಿದಂತೆ ಪ್ರಮುಖ ಪ್ರಾರ್ಥನಾ ಮಂದಿರಗಳು ಮುಚ್ಚಿವೆ.
ಮೀನಾ ಬಜಾರ್ ಸೇರಿದಂತೆ ಬಹುತೇಕ ಕಡೆ ಬಿಕೋ ಎನ್ನುವ ವಾತಾವರಣ ಇದೆ. ಹಬ್ಬವನ್ನು ಮನೆಗಳಲ್ಲಿಯೇ ಆಚರಿಸಲಾಗುತ್ತಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಮೀಸಲು ಪಡೆಯ 3 ಹಾಗೂ ನಗರ ಸಶಸ್ತ್ರ ಮೀಸಲು ಪಡೆಯ 14 ತುಕಡಿಗಳೂ ಸೇರಿದಂತೆ 800ಕ್ಕೂ ಅಧಿಕ ಪೊಲೀಸರನ್ನು ರಕ್ಷಣೆಗೆ ನಿಯೋಜಿಸಲಾಗಿದೆ.