ಮೈಸೂರು: ‘ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳು ವೃತ್ತಿ ಗಳಿಸುವುದನ್ನೇ ಗುರಿ ಎಂದುಕೊಳ್ಳಬಾರದು. ಬದುಕಿನ ಯಾವುದೇ ಕ್ಷಣಗಳನ್ನು ಎದುರಿಸುವ ವ್ಯಕ್ತಿತ್ವವನ್ನು ಹೊಂದಲು ಪ್ರಯತ್ನಿಸಬೇಕು’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಡಾ.ಬಿ.ಸುರೇಶ್ ಸಲಹೆ ನೀಡಿದರು.
ನಗರದ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯದ ಗೋಲ್ಡನ್ ಜ್ಯುಬಿಲಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಎವಾಲ್ವ್–ಟೆಕ್ ಫೆಸ್ಟ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣವೆಂದರೆ ಕೇವಲ ಕಾಲೇಜಿನ ಕೊಠಡಿಯೊಳಗಿನ ಕಲಿಕೆ ಮಾತ್ರವಲ್ಲ. ಹೊರಗಿನ ಬದುಕಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವ ಕ್ರಮ. ಗುರಿಯನ್ನು ಇರಿಸಿಕೊಳ್ಳುವುದು, ಉತ್ತಮ ಸಂವಹನ ಮತ್ತು ಸದಾ ಕ್ರಿಯಾಶೀಲವಾಗಿರುವುದು ನಮಗೆ ಸ್ಥಿರತೆ ನೀಡುತ್ತದೆ. ಸ್ಥಿರವಾದ ವ್ಯಕ್ತಿಗೆ ಉಜ್ವಲ ಭವಿಷ್ಯ ದೊರೆಯುವುದು ಖಂಡಿತ’ ಎಂದು ತಿಳಿಸಿದರು.
ಟೆಕ್ಸ್ಯಾಂಡ್ಸ್ ಎಐ ಕಂಪನಿ ಸಿಇಒ ಮಾನಸ್ ದಾಸ್ಗುಪ್ತಾ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಪಠ್ಯಗಳನ್ನು ಕರಗತ ಮಾಡಿಕೊಳ್ಳುವುದರ ಜೊತೆಗೆ ಹೊರಗಿನ ಉದ್ಯಮಗಳಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಗಳತ್ತಲೂ ಗಮನಹರಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಉತ್ಪನ್ನ ಮತ್ತು ಸೇವಾ ವಲಯಗಳಲ್ಲಿ ಇಂದು ಭಾರಿ ಪ್ರಮಾಣದ ಬದಲಾವಣೆಗಳಾಗಿವೆ. ದಿನ ದಿನವೂ ನೂತನ ತಂತ್ರಾಂಶ ಮತ್ತು ನಿರ್ಮಾಣ ವ್ಯವಸ್ಥೆಗಳು ಸೇರ್ಪಡೆಗೊಳ್ಳುತ್ತಿವೆ. ಅದನ್ನು ತಿಳಿದುಕೊಂಡು, ಅವಕಾಶಗಳಿಗಾಗಿ ನಾವೂ ಅಪ್ಡೇಟ್ ಆಗುತ್ತಿರಬೇಕು’ ಎಂದು ತಿಳಿಸಿದರು.
ಟಿಸಿಎಸ್ನ ಎಚ್ಆರ್ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಆರ್.ಅಂಜನ, ಜೆಎಸ್ಎಸ್ ಎಸ್ಟಿಯು ಉಪ ಕುಲಪತಿ ಡಾ.ಎ.ಎಸ್.ಸಂತೋಷ್ಕುಮಾರ್, ಪ್ಲೇಸ್ಮೆಂಟ್ ಅಧಿಕಾರಿ ಡಾ.ಎಂ.ಪ್ರದೀಪ್, ಸಿಂಧು ಹಾಗೂ ಋತು ಇದ್ದರು.