ಮೈಸೂರು: ಕ್ಯಾಟರಿಂಗ್ ಬಿಲ್ ಬಿಡುಗಡೆ ಮಾಡಲು ₹ 50 ಸಾವಿರ ಲಂಚ ಪಡೆಯುವಾಗ, ಇಲ್ಲಿನ ಮೇಟಗಳ್ಳಿ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಎಫ್ಡಿಎ ಮಹೇಶ ಎಂಬುವರು ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದರು.
ಕೇಂದ್ರದ ಶಿಬಿರಾರ್ಥಿಗಳಿಗೆ ಊಟೋಪಚಾರ ಒದಗಿಸಿದ್ದಕ್ಕೆ ‘ವಿನಾಯಕ ಕ್ಯಾಟರಿಂಗ್’ನ ಮಾಲೀಕ ಶಿವನಾಗ ಎಂಬುವರಿಗೆ ₹ 5.16 ಲಕ್ಷ ಬಿಲ್ ಬಿಡುಗಡೆ ಮಾಡಲಾಗಿತ್ತು. ಆರೋಪಿ ಮಹೇಶ್ ಅವರು, ಬಿಲ್ ಮಾಡಿಸಲು ಶ್ರಮ ವಹಿಸಿದ್ದಕ್ಕೆ ₹ 80 ಸಾವಿರ ಲಂಚ ನೀಡಬೇಕೆಂದು ಕೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಶಿವನಾಗ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದು, ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಎಸ್ಪಿ ವಿ.ಜೆ.ಸಜಿತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ವಿ.ಕೃಷ್ಣಯ್ಯ, ಇನ್ಸ್ಪೆಕ್ಟರ್ಗಳಾದ ಜಯರತ್ನ, ಉಮೇಶ್ ಹಾಗೂ ಸಿಬ್ಬಂದಿ ಗೋಪಿ, ಕಾಂತರಾಜ್, ಪ್ರಕಾಶ್, ಮೋಹನ್ ಗೌಡ, ಶೇಖರ್, ಲೋಕೇಶ್, ಆಶಾ, ವೀಣಾ, ರಮೇಶ್ ಪಾಲ್ಗೊಂಡಿದ್ದರು.