ಮೈಸೂರು: ಮೇಟಗಳ್ಳಿಯ ಜಿಎಸ್ಎಸ್ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಫಾರ್ ವುಮೆನ್ ಕಾಲೇಜಿನಲ್ಲಿ ಜೂನ್ 15 ಮತ್ತು 16ರಂದು ಉದ್ಘಾಟನಾ ಸಮಾರಂಭ ‘ಆರ್ಕಿಯುತ್ಸವ್–2023’ ಆಯೋಜಿಸಲಾಗಿದೆ.
ಜೂನ್ 15ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆ ನಡೆಯಲಿದೆ. ಬೆಂಗಳೂರಿನ ಇಂಟಗ್ರೇಟೆಡ್ ಡಿಸೈನ್ (ಐಎನ್ಡಿಇ) ಸಂಸ್ಥೆಯ ಪ್ರಮುಖ ವಿನ್ಯಾಸಕಾರ ಮೋಹನ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಜಿಎಸ್ಎಸ್ಎಸ್ ಅಧ್ಯಕ್ಷ ಡಾ.ಎಂ.ಜಗನ್ನಾಥ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಗೌರವ ಕಾರ್ಯದರ್ಶಿ ವನಜಾ ಬಿ.ಪಂಡಿತ್, ಆಡಳಿತಾಧಿಕಾರಿ ಅನುಪಮಾ ಬಿ.ಪಂಡಿತ್, ಸಿಇಒ ಆರ್.ಕೆ.ಭರತ್, ಪ್ರಾಂಶುಪಾಲ ಎಸ್.ಗುರುದತ್ ಭಾಗವಹಿಸಲಿದ್ದಾರೆ.
ಎರಡು ದಿನಗಳ ಉತ್ಸವದಲ್ಲಿ ವಿನ್ಯಾಸ ಸ್ಪರ್ಧೆ, ಬಿದಿರು, ನೂಲು ಕಾರ್ಯಾಗಾರ, ಕಾರ್ಡ್ಗಳಲ್ಲಿ ಮನೆ ಕಟ್ಟುವುದು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2ನೇ ದಿನ ವಿನ್ಯಾಸಕಾರ ರವಿ ಗುಂಡೂರಾವ್ ಅವರ ಉಪನ್ಯಾಸವಿದೆ. ಸಮಾರೋಪದಲ್ಲಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.