ಎಚ್.ಡಿ.ಕೋಟೆ: ಹ್ಯಾಂಡ್ಪೋಸ್ಟ್ ಅರಣ್ಯ ಇಲಾಖೆ ಕಚೇರಿ ಎದುರು ಆನೆ ಕಾವಲು ಪಡೆ ಸಿಬ್ಬಂದಿ ಮೂರು ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಭರವಸೆ ಮೇರೆಗೆ ಶುಕ್ರವಾರ ಕೈಬಿಟ್ಟರು.
ಆನೆ ಕಾವಲು ಪಡೆ ಸಿಬ್ಬಂದಿ ವಿವಿಧ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಬುಧವಾರ ಅನಿರ್ದಿಷ್ಟ ಅವಧಿ ಪ್ರತಿಭಟನೆ ಆರಂಭಿಸಿದ್ದರು. ‘ಪಟ್ಟಣದ ಹ್ಯಾಂಡ್ ಪೋಸ್ಟ್ ಅರಣ್ಯ ಇಲಾಖೆ ಕಚೇರಿ ಎದುರು ಒಂದು ವರ್ಷ ನಾಡಿಗೆ ಬಂದ ಕಾಡಾನೆ ಓಡಿಸುವ ಕೆಲಸವನ್ನು ನಮ್ಮಿಂದ ಮಾಡಿಸಿ, ಈಗ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ಬೇರೆಯವರನ್ನು ನಿಯೋಜನೆ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ದೂರಿದ್ದಾರೆ.
ಶಾಸಕರು ಎಚ್.ಡಿ.ಕೋಟೆ ಪಟ್ಟಣಕ್ಕೆ ಬಂದಿದ್ದ ವೇಳೆ, ಪ್ರತಿಭಟನಾ ಸ್ಥಳಕ್ಕೆ ತೆರಳಿ ಸಿಬ್ಬಂದಿಜೊತೆ ಸಮಾಲೋಚನೆ ನಡೆಸಿದರು. ನಂತರ ದೂರವಾಣಿ ಮೂಲಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.
ಆನೆ ಕಾವಲು ಪಡೆ ಸಿಬ್ಬಂದಿ ನಿಂಗರಾಜು ಮಾತನಾಡಿ, ‘ಒಂದು ವರ್ಷದ ಹಿಂದೆ ಗುತ್ತಿಗೆ ಆಧಾರದ ಮೇಲೆ ನಮ್ಮನ್ನು ಆನೆ ಓಡಿಸುವ ಕೆಲಸಕ್ಕೆ ತೆಗೆದುಕೊಂಡು, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ನಮ್ಮ ಜಾಗಕ್ಕೆ ಬೇರೆಯವರನ್ನು ನೇಮಿಸಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ. ನ್ಯಾಯ ದೊರಕಿಸಿ ಕೊಡಬೇಕು’ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಸಿಬ್ಬಂದಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.
ಆನೆ ಕಾವಲು ಪಡೆ ನೌಕರರಾದ ಶಿವಕುಮಾರ್, ಅಣ್ಣಯ್ಯ, ರವಿ, ಭಾಸ್ಕರ್, ಶಿವಪ್ಪ, ಶಿವು, ಕನಕರಾಜ್, ಪ್ರಕಾಶ್ ಕುಮಾರ್, ಪ್ರಗತಿಪರ ಸಂಘಟನೆಯ ಅಕ್ಬರ್ ಪಾಷ, ಎಐಸಿಸಿಟಿಯು ಸಂಚಾಲಕ ಚೌಡಹಳ್ಳಿ ಜವರಯ್ಯ, ನಿಂಗರಾಜು, ಹೈರಿಗೆ ಶಿವರಾಜು, ಶಿವಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.