ಮೈಸೂರು: ನಗರದಲ್ಲಿ ಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿದಿದೆ. ಸುಮಾರು 1 ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯಿತು.
5 ಸೆಂ.ಮೀ.ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಇದು ಅತ್ಯಂತ ಹೆಚ್ಚು ಮಳೆ ಎನಿಸಿದೆ. ಸದ್ಯ, ಬಿದ್ದಿರುವ ಮಳೆಯು ಮುಂಗಾರು ಬೆಳೆಗಳಿಗೆ ಸಹಕಾರಿಯಾಗಿದೆ.
ಮಳೆಯಿಂದ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಅಗ್ರಹಾರ ವೃತ್ತದಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ಬೆಂಗಳೂರು– ನೀಲಗಿರಿ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ಹರಿಯಿತು. ಹಲವೆಡೆ ಒಳಚರಂಡಿ ಪೈಪುಗಳು ಕಟ್ಟಿಕೊಂಡು ಮ್ಯಾನ್ಹೋಲ್ಗಳಲ್ಲಿ ನೀರು ಉಕ್ಕಿತು.
ಕೆ.ಆರ್.ನಗರ ತಾಲ್ಲೂಕಿನಲ್ಲಿ 6 ಸೆಂ.ಮೀ, ಹುಣಸೂರಿನಲ್ಲಿ 3, ನಂಜನಗೂಡಿನಲ್ಲಿ 2, ಪಿರಿಯಾಪಟ್ಟಣ ಹಾಗೂ ತಿ.ನರಸೀಪರಗಳಲ್ಲಿ ತಲಾ ಒಂದು ಸೆಂ.ಮೀ.ನಷ್ಟು ಮಳೆಯಾಗಿದೆ.