ಹುಣಸೂರು (ಮೈಸೂರು): ನಾಗರಹೊಳೆ ಅರಣ್ಯದ ಮೇಟಿಕುಪ್ಪೆ ವಲಯದಲ್ಲಿ ಜಿಂಕೆ ಬೇಟೆಯಾಡಿದ ಹಿರೇಹಳ್ಳಿ ‘ಎ’ ಕಾಲೊನಿ ನಿವಾಸಿ ಮೋಹನ್ ಎಂಬಾತನನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಈತನಿಂದ 14 ಕೆ.ಜಿಯಷ್ಟು ಜಿಂಕೆ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಇದೇ ಕಾಲೊನಿ ನಿವಾಸಿಗಳಾದ ಮಹದೇವ್, ಪ್ರಕಾಶ್ ಮತ್ತು ಶಿವಲಿಂಗೇಗೌಡ ಎಂಬುವವರು ಪರಾರಿಯಾಗಿದ್ದಾರೆ.
‘ಹಿರೇಹಳ್ಳಿಯಿಂದ ಪಡುವರಹಳ್ಳಿ ಕೆರೆಗೆ ಹೋಗುವ ಮಾರ್ಗದಲ್ಲಿ ರಕ್ತದ ಕಲೆಗಳನ್ನು ಕಂಡ ಸಿಬ್ಬಂದಿ, ಅದರ ಜಾಡು ಹಿಡಿದು ಹೊರಟಾಗ ಆರೋಪಿಯು ಮಾಂಸದ ಸಮೇತ ಸಿಕ್ಕಿಬಿದ್ದಿದ್ದಾನೆ. ಉಳಿದ ಮೂವರು ಓಡಿ ಹೋಗಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಸಂತೋಷ್ ಎಂ.ಹೂಗಾರ್ ತಿಳಿಸಿದ್ದಾರೆ.